Publish Date: Tue, 06 Dec 2022 (17:44 IST)
Updated Date: Tue, 06 Dec 2022 (17:48 IST)
ಬೆಂಗಳೂರಿನ KP ಅಗ್ರಹಾರ ಬಳಿ ನಡೆದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ಸದ್ದು ಮಾಡುತ್ತಿದೆ. ಈ ಕೊಲೆಯ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿವೆ. ಕಳೆದ ಶನಿವಾರ ಈ ಪ್ರಕರಣ ನಡೆದಿದ್ದು, ಬರೋಬ್ಬರಿ ಆರು ಮಂದಿ ಸೇರಿ ಅಪರಿಚಿತ ವ್ಯಕ್ತಿಯನ್ನು ಕೊಲೆಗೈದಿದ್ದರು. ಅದರಲ್ಲೂ ಈ ಹತ್ಯೆ ಪ್ರಕರಣದಲ್ಲಿ ಮೂವರು ಮಹಿಳೆಯರೂ ಭಾಗಿಯಾಗಿರುವುದು ಮತ್ತಷ್ಟು ಆಘಾತಕಾರಿ ಅಂಶವಾಗಿದೆ. ಇನ್ನು ಈ ಪ್ರಕರಣದ ಭಯಾನಕತೆ ಅದೆಷ್ಟರ ಮಟ್ಟಿಗೆ ಇತ್ತೆಂದರೆ ಕೊಲೆಗಾರರು ಇಪ್ಪತ್ತು ಬಾರಿ ಕಲ್ಲು ಎತ್ತಿ ಹಾಕಿ ಕುಕೃತ್ಯ ಎಸಗಿದ್ದಾರೆ. ಇದನ್ನು ಕಂಡು ಪೊಲೀಸರೇ ತಬ್ಬಿಬ್ಬಾಗಿದ್ದಾರೆ. ಸದ್ಯ ಮೃತ ವ್ಯಕ್ತಿ ಯಾರೆಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಾದಾಮಿ ಮೂಲದ 26 ವರ್ಷದ ಬಾಳಪ್ಪ ಜಮಖಂಡಿ ಎಂಬುವರೇ ಕೊಲೆಗೀಡಾದ ವ್ಯಕ್ತಿ. ಮೊದಲಿಗೆ ಮಹಿಳೆಯೊಬ್ಬರು ಬಾಳಪ್ಪ ತಲೆ ಮೇಲೆ ಕಲ್ಲು ಎಸೆದು ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಸದ್ಯ ಕೊಲೆ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.