Publish Date: Sat, 03 Jun 2023 (18:35 IST)
Updated Date: Sat, 03 Jun 2023 (18:41 IST)
ಪತ್ನಿಯನ್ನ ಹತ್ಯೆಗೈದು, ಆಸ್ಪತ್ರೆಗೆ ತಂದು ಆಕೆ ಮಾತನಾಡುತ್ತಿಲ್ಲ ಎಂದು ಕಥೆ ಕಟ್ಟಿದ್ದ ಪತಿಯನ್ನ ಯಶವಂತಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. 19ವರ್ಷದ ಪ್ರಿಯಾ ಕೊಲೆಯಾದ ದುರ್ದೈವಿಯಾಗಿದ್ರೆ ಶರತ್ ಬಂಧಿತ ಆರೋಪಿಯಾಗಿದ್ದಾನೆ. ಜೂನ್ 1ರಂದು ಯಶವಂತಪುರದ ಖಾಸಗಿ ಆಸ್ಪತ್ರೆಗೆ ಪತ್ನಿಯ ಶವದೊಂದಿಗೆ ಬಂದಿದ್ದ ಆರೋಪಿ ಆಕೆ ಮಾತನಾಡುತ್ತಿಲ್ಲ ಎಂದು ಗೋಳಾಡಿದ್ದ. ವೈದ್ಯರು ಪರಿಶೀಲಿಸಿದಾಗ ಆತನ ಪತ್ನಿ ಸಾವನ್ನಪ್ಪಿರುವುವುದು ಖಚಿತವಾಗಿತ್ತು. ಪತ್ನಿ ಸಾವನ್ನಪ್ಪಿರುವುದನ್ನ ವೈದ್ಯರು ಖಚಿತಗೊಳಿಸಿದ ನಂತರವೂ ಸಹ ಆರೋಪಿ ಜೋರಾಗಿ ಗೋಳಾಡಿದ್ದ.ಈ ಬಗ್ಗೆ ಅನುಮಾನಾಸ್ಪದ ಸಾವು ಎಂದು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಬಳಿಕ ಮೃತಳ ತಾಯಿ ನೀಡಿದ ದೂರಿನನ್ವಯ ಯಶವಂತಪುರ ಠಾಣಾ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.
ಪೊಲೀಸ್ರ ತನಿಖೆ ವೇಳೆ ಅಸಲ ಕಹಾನಿ ಹೊರಬಿದ್ದಿದೆ. ಆರೋಪಿ ಶರತ್ ಗೆ ಪ್ರಿಯಾ ಎರಡನೇ ಹೆಂಡತಿಯಾಗಿದ್ದು, ಮದುವೆಯಾಗಿ ಮೊದಲ ಹೆಂಡತಿ ಇದ್ದರೂ ಸಹ ಶರತ್ ಎರಡನೇ ಮದುವೆಯಾಗಿ ಪತ್ನಿ ಪ್ರಿಯಾಳೊಂದಿಗೆ ಯಶವಂತಪುರದ ಸಂಜಯ್ ಗಾಂಧಿ ನಗರದಲ್ಲಿ ವಾಸವಿದ್ದ. ಮೊದಲ ಪತ್ನಿಯ ಬಳಿ ಹೋಗ್ತಿಯಾ ಎಂದು ಪದೇ ಪದೇ ಪ್ರಿಯಾ ಜಗಳವಾಡುತ್ತಿದ್ದಳು. ಕೆಲ ದಿನಗಳಿಂದ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳವಾಗುತ್ತಿತ್ತು. ಜೂನ್ 1ರಂದು ಸಂಜೆ ಅದೇ ವಿಚಾರವಾಗಿ ಪುನಃ ಜಗಳ ಆರಂಭವಾದಾಗ ಶರತ್ ಪ್ರಿಯಾಳ ಕತ್ತು ಹಿಸುಕಿದ್ದ. ಉಸಿರಾಟದ ಸಮಸ್ಯೆಯಿಂದ ಪ್ರಿಯಾ ಸಾವನ್ನಪ್ಪಿದ್ದಳು. ಗಾಬರಿಯಿಂದ ಘಟನೆ ಮುಚ್ಚಿಡಲು ಪ್ರಯತ್ನಿಸಿದ್ದ ಶರತ್ ಪತ್ನಿಯ ಮೃತದೇಹವನ್ನ ಆಸ್ಪತ್ರೆಗೆ ತಂದು ಹೈಡ್ರಾಮಾ ಮಾಡಿದ್ದ.
ಶರತ್ ನ ಹೈಡ್ರಾಮಾ ಕಂಡು ಅನುಮಾನಗೊಂಡ ಪೊಲೀಸರಿಗೆ, ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅಸಲಿ ಸತ್ಯ ತಿಳಿದಿತ್ತು. ಮೃತಳ ಮೇಲೆ ಹಲ್ಲೆ ನಡೆದಿದ್ದು, ಕುತ್ತಿಗೆಯ ಬಳಿ ಪಕ್ಕೆಲುಬು ಮುರಿದಿರುವುದು ಪತ್ತೆಯಾಗಿತ್ತು. ಆರೋಪಿ ಶರತ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ವಿಚಾರ ಬಯಲಾಗಿದ್ದು ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.