Publish Date: Sat, 14 May 2022 (14:25 IST)
Updated Date: Sat, 14 May 2022 (14:22 IST)
ಬಾದಾಮಿ: ಒದ್ದು ಒಳಗೆ ಹಾಕಲು ನಾನು ಫುಟ್ಬಾಲ್ ಅಲ್ಲ, ನನ್ನನ್ನು ಒದ್ದರೆ ನಿಮ್ಮ ಕಾಲೇ ಮುರಿಯುತ್ತದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜ ಉತ್ಸವದಲ್ಲಿ ಅವರು ಪ್ರಮೋದ್ ಮುತಾಲಿಕರಂಥವರನ್ನು ಒದ್ದು ಒಳಗೆ ಹಾಕಬೇಕು ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನನ್ನನ್ನು ಒದ್ದು ಜೈಲಿಗೆ ಹಾಕಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಒದ್ದು ಒಳಗೆ ಹಾಕಲು ನಾನು ಫುಟ್ಬಾಲ್ ಅಲ್ಲ. ಹಿಂದೂ ಕಲ್ಲುಗುಂಡು ನಾನು, ನನ್ನನ್ನು ಒದ್ದರೆ ನಿಮ್ಮ ಕಾಲೇ ಮುರಿಯುತ್ತದೆ. ಎಚ್ಡಿಕೆ ಮುಸ್ಲಿಮರ ಮತ ಪಡೆಯಲು ನಮ್ಮನ್ನು ಕೆಣಕುತ್ತಿದ್ದಾರೆ ಎಂದರು.
ಶ್ರೀರಾಮಸೇನೆ ಹಾಗೂ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಮಸೂದ್ ಅವರು ಬೇಷರತ್ ಕ್ಷಮೆ ಯಾಚಿಸಿ, ತಾವು ನೀಡಿದ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಅಡ್ಯಾರ್ ಆಗ್ರಹಿಸಿದ್ದಾರೆ.
ಮಂಗಳೂರಿನ ಆರ್ಯ ಸಮಾಜದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮಸೇನೆ ಇಸ್ಲಾಂ ಧರ್ಮಕ್ಕೆ, ಆಜಾನ್ನ್ನುಎಂದೂ ವಿರೋಧಿಸಿಲ್ಲ, ಆದರೆ ಸುಪ್ರೀಂ ಕೋರ್ಟ್ ತೀರ್ಪು ಪಾಲನೆಗೆ ಮಾತ್ರ ಆಗ್ರಹಿಸಿ ಹೋರಾಟ ನಡೆಸಿದೆ. ಪ್ರಮೋದ್ ಮುತಾಲಿಕ್ ಅವರು ಮಳಲಿ ಮಸೀದಿಯಲ್ಲಿ ಪತ್ತೆಯಾದ ದೇವಸ್ಥಾನ ಕುರುಹು ವೀಕ್ಷಣೆಗೆ ಅವಕಾಶ ನೀಡುವಂತೆ ಕೋರಲು ಪೊಲೀಸ್ ಕಮಿಷನರ್ನ್ನು ಭೇಟಿ ಮಾಡಿದ್ದಾರೆ.
ಆದರೆ ಕಮಿಷನರ್ ಕಚೇರಿಯಲ್ಲಿ ಯಾವುದೇ ಆತಿಥ್ಯ ನೀಡಿಲ್ಲ. ಅವರು ಬನ್ನಿ ಕುಳಿತುಕೊಳ್ಳಿ ಎಂದು ಹೇಳಿರುವುದನ್ನೇ ತಿರುಚಿ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಓರ್ವ ಸಂಘಟನೆಯ ಮುಖಂಡನಾಗಿ ಮುತಾಲಿಕ್ ಅವರಿಗೆ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವ ಸ್ವಾತಂತ್ರ್ಯ ಇಲ್ಲವೇ ಎಂದು ಪ್ರಶ್ನಿಸಿದರು.