Publish Date: Mon, 30 Mar 2026 (18:39 IST)
Updated Date: Mon, 30 Mar 2026 (18:42 IST)
ಬೆಳ್ತಂಗಡಿ: ಕಳೆದ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವವಿವಾಹಿತ ಉದ್ಯಮಿಯೊಬ್ಬರು ಪತ್ನಿಯ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಮಾ.29ರ ಭಾನುವಾರ ನಡೆದಿದೆ.
ಮೃತರನ್ನು ಪುತ್ತೂರು ತಾಲೂಕಿನ ನೆಲ್ಯಾಡಿ ಮೂಲದ ಬಿ ಸುಧೀಪ್ ರೈ (36) ಎಂದು ಗುರುತಿಸಲಾಗಿದೆ. ಇವರು ಬೆಳ್ತಂಗಡಿಯ ಲಾಯಿಲ ಗ್ರಾಮದ ಕಾರ್ನೋಡಿಯಲ್ಲಿರುವ ತಾತನ ಮನೆಯಲ್ಲಿ ವಾಸವಿದ್ದರು.
ಮಾರ್ಚ್ 17 ರಂದು ಸುಧೀಪ್ ರೈ ಅವರು ಆಹಾರದ ಜತೆಗೆ ವಿಷವನ್ನು ಸೇವಿಸಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.
ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಕಳ ತಾಲೂಕಿನ ಕಜೆ ನಿವಾಸಿ ಸೌಮ್ಯ ಶೆಟ್ಟಿ (28) ಎಂಬಾಕೆಯೊಂದಿಗೆ ಫೆ.17ರಂದು ಮನೆಯವರಿಗೆ ತಿಳಿಸದೆ ವಿವಾಹ ನೋಂದಣಿ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಮಾರ್ಚ್ 17 ರಂದು ಪತ್ನಿಯ ಮನೆಯಲ್ಲಿ ವಿಷ ಸೇವಿಸಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸ್ ತನಿಖೆಯಿಂದ ತಿಳಿದುಬರುವ ನಿರೀಕ್ಷೆಯಿದೆ. ಮೃತನ ತಂದೆ ದಾಮೋದರ ರೈ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.