Publish Date: Thu, 26 Jul 2018 (19:32 IST)
Updated Date: Thu, 26 Jul 2018 (19:35 IST)
ಸಿಎಂ ಸ್ವಕ್ಷೇತ್ರದಿಂದಲೇ ಪ್ರಾರಂಭಗೊಂಡ ಬಿಜೆಪಿ ಪಾದಯಾತ್ರೆ. ರಾಜ್ಯ ರೈತರ ಸಂಪೂರ್ಣ ಸಾಲಮನ್ನಾಕ್ಕಾಗಿ ಬಿಜೆಪಿ ಕಾಯಕರ್ತರು ಹಾಗೂ ರೈತ ಸಂಘದ ಕಾರ್ಯಕರ್ತರು ಪಾದಯಾತ್ರೆ ಆರಂಭಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆಗೆ, ರೈತರು ಭಾಗವಹಿಸುವ ಮೂಲಕ ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ. ಜಿಲ್ಲೆಯ ಸ್ಥಳೀಯ ನಾಯಕರ ಗೈರು ಹಾಜರಿಯೊಂದಿಗೆ ಬಿಜೆಪಿ ಪಾದಯಾತ್ರೆ ಆರಂಭಗೊಂಡಿದ್ದು ಜಿಲ್ಲಾ ಬಿಜೆಪಿಯಲ್ಲಿನ ಗೊಂದಲವನ್ನ ಸಾರುತಿತ್ತು.
ಮೂರುದಿನಗಳ ಕಾಲ ರಾಮನಗರ ಜಿಲ್ಲಾ ಬಿಜೆಪಿ ವತಿಯಿಂದ ಚನ್ನಪಟ್ಟಣದ ಕೆಂಗಲ್ ಆಂಜನೇಯ ದೇವಾಲಯದಿಂದ ಬೆಂಗಳೂರಿನ ವಿಧಾನ ಸೌಧದ ವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಅದು ಕೂಡ ಸಿಎಂ.ಹೆಚ್.ಡಿ.ಕುಮಾರಸ್ವಾಮಿ ಕರ್ಮಭೂಮಿ ರಾಮನಗರ ಜಿಲ್ಲೆಯಿಂದ ಪಾದಯಾತ್ರೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಶಾಸಕ ಕುಮಾರ್ ಬಂಗಾರಪ್ಪ, ರೇಣುಕಾಚಾರ್ಯ, ಎಂಎಲ್ಸಿಗಳಾದ ತೇಜಸ್ವಿನಿಗೌಡ, ಆ ದೇವೇಗೌಡ, ನಟ ಶ್ರೀನಗರ ಕಿಟ್ಟಿ, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ನೇತೃತ್ವದಲ್ಲಿ ಕೆಂಗಲ್ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೆಂಗಲ್ ಹನುಮಂತಯ್ಯ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಬಿಜೆಪಿ ಜೊತೆಗೆ ಉತ್ತರ ಕರ್ನಾಟಕದ ರೈತರು ಸಹ ಪಾದಯಾತ್ರೆಗೆ ಬೆಂಬಲ ನೀಡಿದ್ರು. ರಾಜ್ಯ ರೈತ ಸಂಘದ ಲಕ್ಷ್ಮೀನಾರಯಣಗೌಡ ನೇತೃತ್ವದಲ್ಲಿ ನೂರಾರು ರೈತರು ಪಾದಯಾತ್ರೆಗೆ ಆಗಮಿಸಿದ್ರು. ರಾಜ್ಯದ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಸಮಗ್ರ ನೀರಾವರಿ ಹಾಗಬೇಕೆಂಬ ಆಜೆಂಡದೊಂದಿಗೆ ಬಿಜೆಪಿ ಇವತ್ತು ಕುಮಾರಸ್ವಾಮಿ ಕ್ಷೇತ್ರದಿಂದ ಪಾದಯಾತ್ರೆ ಹಮ್ಮಿಕೊಂಡಿದೆ.