Publish Date: Wed, 11 Jan 2023 (10:09 IST)
Updated Date: Wed, 11 Jan 2023 (10:11 IST)
ಕಲಬುರಗಿ : ಶಾಲಾ-ಕಾಲೇಜುಗಳ ಮುಂದೆ ಡ್ರಗ್ಸ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಸಣ್ಣ ಸಣ್ಣ ಮಕ್ಕಳು ಡ್ರಗ್ಸ್ ದಂಧೆಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಶಾಲಾ ಮಕ್ಕಳಿಗೆ ಹೊಸ ಶಿಕ್ಷಣ ನೀತಿ ತರುವ ಬದಲು ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವ ಕೆಲಸ ಸರ್ಕಾರದಿಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎಗ್ಗಿಲ್ಲದೆ ನಡೆದಿರುವ ಡ್ರಗ್ಸ್ ದಂಧೆಯ ಕುರಿತು ಮಾತನಾಡಿದರು.
ಒಂದೂವರೆ ವರ್ಷದ ಹಿಂದೆ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಸುದ್ದಿಯಾಗಿತ್ತು. ಚಿತ್ರ ರಂಗದ ಇಬ್ಬರು ನಟಿಯರು ಕೂಡಾ ಬಂಧನವಾಗಿ ಜೈಲಿಗೆ ಹೋಗಿದ್ದ ಪ್ರಸಂಗ ನಡೆದಿದೆ. ಡ್ರಗ್ಸ್ ದಂಧೆ ಮಾಡುವ ಬೇರೆ ಬೇರೆಯವರು ಬಂಧನವಾಗಿದ್ದಾರೆ. ಆದರೆ ಬಳಿಕ ಅವರೆಲ್ಲ ಏನಾದರು ಎಂಬುದೇ ಗೊತ್ತಿಲ್ಲ. ಅವರ ಬಗ್ಗೆ ಬಿ-ರಿಪೋರ್ಟ್ ಹಾಕಿದ್ದಾರೋ, ಅಥವಾ ಸಿ-ರಿಪೋರ್ಟ್ ಹಾಕಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ನಾನು ಅಂದೇ ಡ್ರಗ್ಸ್ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದೆ, ಈ ಪ್ರಕರಣವನ್ನು ಹಳ್ಳ ಹಿಡಿಸುತ್ತಾರೆಂದು. ಇವತ್ತು ಮತ್ತೆ ಸ್ವೇಚ್ಛಾಚಾರವಾಗಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದರು.