Publish Date: Thu, 27 Dec 2018 (18:17 IST)
Updated Date: Thu, 27 Dec 2018 (18:19 IST)
ರಾಜ್ಯದ ಸಂಸದರು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಕಾವೇರಿ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಮೇಕೆದಾಟು ಅಣೆಕಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಸರ್ಕಾರದ ನಡೆಯನ್ನು ವಿರೋಧಿಸಿ ರಾಜ್ಯದ ಸಂಸದರು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಮೇಕೆದಾಟು ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ಹಸಿರು ನಿಶಾನೆ ತೋರಬೇಕು ಎಂದು ಒತ್ತಾಯಿಸಿ ರಾಜ್ಯದ ಸಂಸದರು ಪಕ್ಷಾತೀತವಾಗಿ ಧರಣಿ ನಡೆಸಿದರು.
ಪ್ರತಿಭಟನೆಯಲ್ಲಿ ಡಿ.ಕೆ ಸುರೇಶ್, ಶೋಭಾಕರಂದ್ಲಾಜೆ, ಪ್ರಕಾಶ್ ಹುಕ್ಕೇರಿ, ಸುರೇಶ್ ಅಂಗಡಿ, ಪ್ರಹ್ಲಾದ್ ಜೋಷಿ, ಶಿವರಾಮೇಗೌಡ, ಧೃವ ನಾರಾಯಣ, ಜಿ.ಎಂ. ಸಿದ್ದೇಶ್ವರ್, ರಾಜ್ಯಸಭಾ ಸದಸ್ಯರಾದ ಬಿ.ಕೆ ಹರಿಪ್ರಸಾದ್, ರಾಜೀವ್ಗೌಡ, ಡಾ. ಎಲ್. ಹನುಮಂತಯ್ಯ, ಉಪೇಂದ್ರ ರೆಡ್ಡಿ, ಜಿ.ಸಿ ಚಂದ್ರಶೇಖರ್, ನಸೀರ್ಅಹ್ಮದ್ ಸೇರಿದಂತೆ ಹಲವು ಸಂಸದರು ಪ್ರತಿಭಟನೆ ನಡೆಸಿದರು. ಮೇಕೆದಾಟು ಯೋಜನೆ ರಾಜ್ಯಕ್ಕೆ ಬೇಕು ಎಂದು ಆಗ್ರಹ ಮಾಡಿದರು.
ಮೇಕೆದಾಟು ಜಲಾಶಯ ನಿರ್ಮಾಣದಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಾಲ ಕಾಲಕ್ಕೆ ತಮಿಳುನಾಡಿಗೆ ಬಿಡಬೇಕಾಗಿರುವ ನೀರು ಯಾವುದೇ ಕಾರಣಕ್ಕೂ ತಪ್ಪಿಸುವುದಿಲ್ಲ. ಹಾಗಿದ್ದರೂ ತಮಿಳುನಾಡಿನ ಸಂಸದರು ಹಾಗೂ ಅಲ್ಲಿನ ಸರ್ಕಾರ ವಿನಾಕಾರಣ ಯೋಜನೆಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.