Publish Date: Wed, 13 Nov 2024 (14:36 IST)
Updated Date: Wed, 13 Nov 2024 (14:46 IST)
ಬೆಂಗಳೂರು: ಸಾಮಾನ್ಯವಾಗಿ ರಸ್ತೆ ಗುಂಡಿ ಬಗ್ಗೆ ಗಿಡ ನೆಟ್ಟೋ, ಪ್ರತಿಭಟನೆಗಳನ್ನು ಮಾಡಿಯೋ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಆದರೆ ಇಲ್ಲಿ ವಿಶಿಷ್ಟ ಪೋಸ್ಟರ್ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ.
ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ರಸ್ತೆ ಗುಂಡಿ ಬಗ್ಗೆ ಯಾರೋ ಹಾಕಿರುವ ಫಲಕವೊಂದು ಎಲ್ಲರ ಗಮನ ಸೆಳೆಯುವಂತಿದೆ. ರಸ್ತೆ ಗುಂಡಿ ಬಗ್ಗೆ ಸರ್ಕಾರದ ಗಮನ ಸೆಳೆದು ಬೇಸತ್ತ ಯಾರೋ ಒಬ್ಬರು ರಸ್ತೆ ಪಕ್ಕದಲ್ಲೇ ಇಲ್ಲಿ ನಿಧಿ ಇದೆ ಎಂದು ಜ್ಯೋತಿಷಿಯೊಬ್ಬರು ಹೇಳಿರುವುದರಿಂದ ಸರ್ಕಾರ ನಿಧಿ ಹುಡುಕಲು ಗುಂಡಿ ತೆಗೆದಿದೆ. ನಿಧಾನವಾಗಿ ಚಲಿಸಿ ಎಂದು ವ್ಯಂಗ್ಯವಾಗಿ ಪೋಸ್ಟರ್ ಹಾಕಿದ್ದಾರೆ.
ಎಚ್ಚರಿಕೆಯ ಫಲಕ. ಯಾರೋ ಮಾಂತ್ರಿಕರು ಕೈಕಂಬದಿಂದ ಕುಕ್ಕೆ ಸುಬ್ರಹ್ಮಣ್ಯವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೊಡಿಸಿ ಹಾಗೆಯೇ ಬಿಟ್ಟಿದ್ದಾರೆ. ನಿಧಾನವಾಗಿ ಚಲಿಸಿ ಎಂದು ಬೋರ್ಡ್ ಹಾಕಲಾಗಿದೆ.
ಈ ಬೋರ್ಡ್ ನೋಡಿ ನಗಬೇಕೋ ಅಲ್ಲಾ ಇಷ್ಟು ರಸ್ತೆ ಗುಂಡಿಗಳಿದ್ದರೂ ಸ್ಪಂದಿಸದ ಸರ್ಕಾರದ ಬಗ್ಗೆ ದುಃಖ ಪಡಬೇಕೋ ಗೊತ್ತಿಲ್ಲ. ಆದರೆ ಎಷ್ಟು ಹೇಳಿದರೂ ಕಿವಿಯೇ ಕೊಡದ ಸರ್ಕಾರಕ್ಕೆ ಯಾರೋ ಈ ರೀತಿ ಸರಿಯಾಗಿಯೇ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.