Publish Date: Wed, 13 Nov 2024 (09:28 IST)
Updated Date: Wed, 13 Nov 2024 (09:34 IST)
ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನಲ್ಲಿ ಇಂದು ಉಪಚುನಾವಣೆ ನಡೆಯುತ್ತಿದ್ದು, ಬೆಳ್ಳಂ ಬೆಳಿಗ್ಗೆಯೇ ಅಭ್ಯರ್ಥಿಗಳ ಕುಟುಂಬಸ್ಥರು ಮತ ಚಲಾಯಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರ ಸಹೋದರ ಸಿಪಿ ರಾಜೇಶ್ ಚಕ್ಕೆರೆ ಮತಗಟ್ಟೆಯಲ್ಲಿ ಬೆಳಿಗ್ಗೆಯೇ ಬಂದು ಮತ ಚಲಾಯಿಸಿ ಹೋಗಿದ್ದಾರೆ. ಇನ್ನು ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ, ಪತಿ, ಸಂಸದ ಇ ತುಕರಾಂ ಜೊತೆ ಬಂದು ಮತ ಚಲಾಯಿಸಿ ಹೋಗಿದ್ದಾರೆ.
ಬಳಿಕ ಮಾತನಾಡಿದ ಇ ತುಕರಾಂ, ವೋಟಿಂಗ್ ಮಾಡಿದ್ದು ಖುಷಿಯಾಗಿದೆ. ಸಂವಿಧಾನದ ಆಶಯದಂತೆ ಇಂದು ಎಲ್ಲರೂ ಮತದಾನ ಮಾಡುತ್ತಿದ್ದಾರೆ. ಇದು ನನಗೆ ಆರನೇ ಚುನಾವಣೆ. ನಾನು ನಾಲ್ಕು ಬಾರಿ ಗೆದ್ದಿದ್ದೆ. ಈಗ ನನ್ನ ಧರ್ಮಪತ್ನಿ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಅವರನ್ನೂ ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.
ಸಾರ್ವರ್ತಿಕ ಚುನಾವಣೆಗೆ ಹೋಲಿಸಿದರೆ ಈ ಉಪಚುನಾವಣೆಯಲ್ಲಿ ಬೆಳಿಗ್ಗೆ ಇಂದು ಚಳಿಯ ಪ್ರಭಾವಕ್ಕೋ ಏನೋ ಜನ ಕೊಂಚ ಕಡಿಮೆಯಾಗಿದ್ದರೂ ನಿಧಾನವಾಗಿ ಜನ ಮತಗಟ್ಟೆಯತ್ತ ಬರುತ್ತಿದ್ದಾರೆ. ಈ ಬಾರಿಯ ಚುನಾವಣೆ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ-ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿದೆ.