Publish Date: Wed, 18 Dec 2024 (11:36 IST)
Updated Date: Wed, 18 Dec 2024 (11:39 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತೆ ಪ್ರತ್ಯಕ್ಷರಾಗಿದ್ದು ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಹೊರಾಟ ಕೈ ಬಿಡುವಂತೆ ಸಿಎಂ ಪತ್ನಿ ಪಾರ್ವತಿ ಆಪ್ತರು ಒತ್ತಡ ಹಾಕುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಹೊಸ ಆರೋಪ ಮಾಡಿದ್ದಾರೆ. ನನ್ನ ಸಾವಾದರೂ ಸರಿಯೇ ಮುಡಾ ಹಗರಣದ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ ಎಂದಿದ್ದಾರೆ.
ನಿನ್ನೆಯಷ್ಟೇ ಸ್ನೇಹಮಯಿ ಕೃಷ್ಣ ನಾಪತ್ತೆಯಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಚಾಮುಂಡೇಶ್ವರಿ ದೇವಿಯ ಸೀರೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಆರೋಪಿಸಿದ ಬೆನ್ನಲ್ಲೇ ಅವರು ನಾಪತ್ತೆಯಾಗಿದ್ದು ಎಲ್ಲರ ಅನುಮಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ದೇವಾಲಯ ಕಾರ್ಯದರ್ಶಿ ರೂಪಾ ಪ್ರತಿ ದೂರು ನೀಡಿದ್ದರಿಂದ ಬಂಧನದಿಂದ ತಪ್ಪಿಸಿಕೊಳ್ಳಲು ತಲೆ ಮರೆಸಿಕೊಂಡಿರಬಹುದು ಎನ್ನಲಾಗಿತ್ತು. ಇದಾದ ಬೆನ್ನಲ್ಲೇ ಅವರ ವಿರುದ್ಧ ಕೇಸ್ ಗೆ ಕೋರ್ಟ್ ತಡೆಯಾಜ್ಞೆ ನೀಡಿತ್ತು.
ಇದೀಗ ಅವರು ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಮುಡಾ ಹಗರಣ ಹೋರಾಟ ನಿಲ್ಲಿಸಲು ನನಗೆ ಆಮಿಷೊಡ್ಡಿದ್ದರು. ಸಿಎಂ ಪತ್ನಿ ಪಾರ್ವತಿ ಆಪ್ತರು ಎಂದು ಹೇಳಲಾಗುವ ಇಬ್ಬರು ವ್ಯಕ್ತಿಗಳು ಸಂಪರ್ಕಿಸಿ ಹಣದ ಆಮಿಷವೊಡ್ಡಿದ್ದರು ಎಂಬ ಗಂಭೀರ ಆಪಾದನೆಯನ್ನೂ ಅವರು ಮಾಡಿದ್ದಾರೆ.