ಬೆಂಗಳೂರು: ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ದುರಂತದ ಬಗ್ಗೆ ಜೊತೆಯಲ್ಲಿದ್ದವರೂ ನನಗೆ ಕೂಡಲೇ ಮಾಹಿತಿ ನೀಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಳಲು ತೋಡಿಕೊಂಡಿದ್ದಾರೆ.
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಇದಕ್ಕೆ ಹೈಕಮಾಂಡ್ ಕೂಡಾ ಸಿಟ್ಟಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ತಕ್ಷಣವೇ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಅದರಂತೆ ಇಂದು ಸಿಎಂ ಮತ್ತು ಡಿಸಿಎಂ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ.
ಕಾಲ್ತುಳಿತ ಪ್ರಕರಣದ ನಂತರ ಸಿಎಂ ಸಿದ್ದರಾಮಯ್ಯ ಏನೇ ಹೇಳಿಕೆ ನೀಡಿದರೂ ವಿವಾದವಾಗುತ್ತಿದೆ. ಕಾಲ್ತುಳಿತವಾಗಿದ್ದು 3 ಗಂಟೆ ಸುಮಾರಿಗೆ. ಆದರೆ ನನಗೆ ಗೊತ್ತಾಗಿದ್ದು 5.45 ಕ್ಕೆ ಎಂದು ಸಿಎಂ ಹೇಳಿಕೆ ನೀಡಿದ್ದರು. ಒಬ್ಬ ಸಿಎಂ ಆಗಿ ಇಷ್ಟು ದೊಡ್ಡ ವಿಚಾರ ತಮ್ಮ ಎದುರೇ ಆಗುತ್ತಿದ್ದರೂ ಗೊತ್ತಾಗಲಿಲ್ಲವೇ ಎಂದು ಹಲವರು ಟೀಕೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ನಿನ್ನೆ ಸಹೋದ್ಯೋಗಿಗಳೊಂದಿಗಿನ ಸಭೆಯಲ್ಲೂ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ತನ್ನ ಜೊತೆಗೆ ಇಡೀ ದಿನವಿದ್ದರೂ ತನಗೆ ದುರ್ಘಟನೆ ಬಗ್ಗೆ ಮಾಹಿತಿ ನೀಡಲಿಲ್ಲ. ಕಮಿಷನರ್ ದಯಾನಂದ್ ಕೂಡಾ ನನಗೆ ಕೂಡಲೇ ಮಾಹಿತಿ ನೀಡಲಿಲ್ಲ ಎಂದು ಸಿಎಂ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.