Publish Date: Tue, 09 Dec 2025 (09:28 IST)
Updated Date: Tue, 09 Dec 2025 (09:30 IST)
ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಹೇಳಿಕೆ ಕೊಟ್ಟು ಅನಗತ್ಯ ಗೊಂದಲ ಮೂಡಿಸಿರುವ ಪುತ್ರ ಯತೀಂದ್ರಗೆ ಬುಲಾವ್ ನೀಡಿರುವ ಸಿಎಂ ಸಿದ್ದರಾಮಯ್ಯ ವಾರ್ನಿಂಗ್ ಕೊಟ್ಟಿದ್ದಾರೆ.
ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ, ತಂದೆಯವರೇ ಐದು ವರ್ಷ ಸಿಎಂ ಆಗಿ ಅಧಿಕಾರವಧಿ ಪೂರ್ಣಗೊಳಿಸಲಿದ್ದಾರೆ. ಡಿಕೆ ಶಿವಕುಮಾರ್ ಹೈಕಮಾಂಡ್ ಬಳಿ ಅವಕಾಶ ಕೇಳಿದ್ದಾರೆ. ಆದರೆ ಹೈಕಮಾಂಡ್ ಒಪ್ಪಿಲ್ಲ ಎಂದು ಹೇಳಿಕೆ ನೀಡಿದ್ದರು.
ಅವರ ಹೇಳಿಕೆ ಈಗ ಕಾಂಗ್ರೆಸ್ ನಲ್ಲಿ ಮತ್ತೆ ಗೊಂದಲ ಮೂಡುವಂತೆ ಮಾಡಿದೆ. ತಮ್ಮ ಪುತ್ರನಿಂದಲೇ ನಾಯಕತ್ವ ವಿಚಾರವಾಗಿ ಗೊಂದಲ ಮೂಡಿರುವುದು ಸಿದ್ದರಾಮಯ್ಯ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಯತೀಂದ್ರಗೆ ಅವರು ಬುಲಾವ್ ನೀಡಿದ್ದಾರೆ.
ಪುತ್ರನನ್ನು ಸರ್ಕಿಟ್ ಹೌಸ್ ಗೆ ಕರೆಸಿಕೊಂಡು ಸುಮಾರು 1 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬಹಿರಂಗವಾಗಿ ಯಾವುದೇ ಹೇಳಿಕೆ ಕೊಡಬೇಡ. ಇದರಿಂದ ಅನಗತ್ಯ ಗೊಂದಲ ಮೂಡಲು ನೀನೇ ಕಾರಣವಾಗುತ್ತೀ ಎಂದು ಎಚ್ಚರಿಕೆ ನೀಡಿದ್ದಾರೆ. ಹೈಕಮಾಂಡ್ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಸೂಚನೆ ಕೊಟ್ಟಿದೆ. ಈಗ ನೀನೇ ಹೇಳಿಕೆ ಕೊಟ್ಟರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.