Publish Date: Tue, 10 Feb 2026 (15:40 IST)
Updated Date: Tue, 10 Feb 2026 (15:43 IST)
ಬೆಂಗಳೂರು: ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡ್ತೀರಾ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ಗರಂ ಆಗಿ ಕರೆಯದೆ ಇದ್ದಮೇಲೆ ನಾನ್ಯಾಕಮ್ಮ ಹೋಗ್ಲಿ ಎಂದರು.
ಅಸ್ಸಾಂ ಚುನಾವಣೆ ತಯಾರಿ ನೆಪದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದಾರೆ. ಬಜೆಟ್ ಕುರಿತು ಇಂದು ಸಭೆ ಇದ್ದರೂ ಅದನ್ನು ಬಿಟ್ಟು ಅವರು ಪ್ರಿಯಾಂಕ ಗಾಂಧಿ ಕರೆದಿರುವ ಸಭೆಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಈಗ ಮತ್ತೊಮ್ಮೆ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿದೆ. ಹೀಗಾಗಿ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗಳು ಸಿಎಂ ಸಿದ್ದರಾಮಯ್ಯನವರನ್ನು ಈ ಕುರಿತು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಅವರು ಹೌದು ಡಿಕೆಶಿ ಅವರು ನನಗೆ ಪತ್ರ ಬರೆದು ಅನುಮತಿ ಕೇಳಿದ್ರು. ಚುನಾವಣೆ ವಿಚಾರ ದೆಹಲಿಯಲ್ಲಿ ಮೀಟಿಂಗ್ ಇದೆ ಅಂದಿದ್ರು ಎಂದಿದ್ದಾರೆ.
ಈ ವೇಳೆ ಮಾಧ್ಯಮ ಪ್ರತಿನಿಧಿಯೊಬ್ಬರು ನೀವು ದೆಹಲಿಗೆ ಹೋಗ್ತೀರಾ ಸಾರ್ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಗರಂ ಆಗಿ ಉತ್ತರಿಸಿದ ಸಿಎಂ ಕರೆಯದೆ ಇದ್ದಮೇಲೆ ನಾನ್ಯಾಕೆ ಹೋಗ್ಲಮ್ಮ ದೆಹಲಿಗೆ? ನನಗೆ ಇಲ್ಲಿಯೇ ಬೇಕಾದಷ್ಟು ಕೆಲಸವಿದೆ ಎಂದಿದ್ದಾರೆ.