Publish Date: Mon, 09 Feb 2026 (17:10 IST)
Updated Date: Mon, 09 Feb 2026 (17:12 IST)
ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆಗೆ ನೀವೇ ಕಾರಣ ಎಂದು ರಾಜ್ಯ, ಕೇಂದ್ರ ಕಿತ್ತಾಡಿಕೊಂಡಿದ್ದು ಆಯ್ತು. ಈಗ ಇಳಿಕೆಗೆ ನಾವೇ ಕಾರಣ ಎಂದು ಇಬ್ಬರೂ ಕ್ರೆಡಿಟ್ ವಾರ್ ಶುರು ಮಾಡಿದ್ದಾರೆ.
ನಮ್ಮ ಮೆಟ್ರೋ ದರ ಶೇ.5 ಕ್ಕೆ ಏರಿಕೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಡುವೆ ಜಟಾಪಟಿ ಶುರುವಾಗಿತ್ತು. ಕೇಂದ್ರವೇ ಏರಿಕೆ ಮಾಡಿದ್ದು ಎಂದು ಸಿಎಂ, ಡಿಸಿಎಂ ಆದಿಯಾಗಿ ಕಾಂಗ್ರೆಸ್ ನಾಯಕರು ದೂರಿದ್ದರು. ಇತ್ತ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರವೇ ಕಾರಣ ಎಂದು ಪ್ರತಿಭಟನೆಯನ್ನೇ ಮಾಡಿದ್ದರು.
ಇದೀಗ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದೆ. ಇದರ ಬೆನ್ನಲ್ಲೇ ತೇಜಸ್ವಿ ಸೂರ್ಯ ಕೇಂದ್ರ ಸಚಿವ ಮನೋಹರ್ ಲಾಲ್ ಕಟ್ಟರ್ ಜೊತೆ ಮಾತನಾಡಿ ದರ ಏರಿಕೆ ಮಾಡದಂತೆ ಸೂಚನೆ ಕೊಡಿಸಿದ್ದಾಗಿ ಹೇಳಿಕೊಂಡಿದ್ದರು.
ಆದರೆ ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ದರ ಇಳಿಕೆ ಮಾಡಿದ್ದು ಕೇಂದ್ರವಲ್ಲ, ನಾವು ಎಂದು ತಿರುಗೇಟು ಕೊಟ್ಟಿದ್ದಾರೆ. ಮೆಟ್ರೋಗೆ ನಮ್ಮ ಕೊಡುಗೆಯೇ ಹೆಚ್ಚು ಎಂದು ಅಂಕಿ ಅಂಶ ನೀಡಿರುವ ಅವರು ದರ ಹೆಚ್ಚಳದ ಬಗ್ಗೆ ದರ ನಿಗದಿ ಸಮಿತಿ ಒಂದು ವರ್ಷದ ಹಿಂದೆಯೇ ಹೇಳಿತ್ತು. ಆಗ ಇವರು ಯಾರೂ ಧ್ವನಿ ಎತ್ತಿಲ್ಲ. ನಾವು ನಮ್ಮ ಸರ್ಕಾರದ ಪರಿಮಿತಿಯಲ್ಲಿ ಏನು ಮಾಡಬಹುದೋ ಅದೆಲ್ಲವನ್ನೂ ಮಾಡುತ್ತೇವೆ ಎಂದಿದ್ದಾರೆ. ದರ ನಿಗದಿ ಸಮಿತಿಗೆ ನಿಮ್ಮ ಲೆಕ್ಕಾಚಾರಗಳೇನಿದೆಯೋ ಅದನ್ನು ಪುನರ್ ಪರಿಶೀಲಿಸಿ. ಅಲ್ಲಿಯವರೆಗೆ ದರ ಏರಿಕೆಯನ್ನು ತಡೆ ಹಿಡಿಯಿರಿ ಎಂದಿದ್ದೇವೆ. ಯಾರ ಒತ್ತಡಕ್ಕೂ ಮಣಿದು, ಕೇಂದ್ರ ಸರ್ಕಾರ ಅಥವಾ ನಾಯಕರ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.