ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ವಿಚಾರ ಸದ್ದು ಮಾಡುತ್ತಿದೆ. ಒಮ್ಮೆ ತಣ್ಣಗಾಗಿದ್ದ ರಾಜಕೀಯ ವಿದ್ಯಮಾನಗಳು ಈಗ ಮತ್ತೆ ಭುಗಿಲೇಳಲು ಕಾರಣಗಳು ಹಲವು ಎನ್ನಲಾಗುತ್ತಿದೆ.
ಡಿಸೆಂಬರ್ ನಲ್ಲಿ ಸುಂಟರ ಗಾಳಿ ಎಬ್ಬಿಸಿದ್ದ ಸಿಎಂ ಬದಲಾವಣೆ ವಿಚಾರ ಜನವರಿ ಹೊತ್ತಿಗೆ ತಣ್ಣಗಾಗಿತ್ತು. ಹೈಕಮಾಂಡ್ ನಿಂದ ಸ್ವಲ್ಪ ದಿನ ಕಾಯುವಂತೆ ಸಂದೇಶ ಬಂದ ಹಿನ್ನಲೆಯಲ್ಲಿ ಇಷ್ಟು ದಿನ ಎರಡೂ ಬಣದ ನಾಯಕರು ಸುಮ್ಮನಿದ್ದರು ಎಂದು ಹೇಳಲಾಗುತ್ತಿದೆ.
ಆದರೆ ಹೈಕಮಾಂಡ್ ಎರಡು ಅಧಿವೇಶನಗಳೇ ಮುಗಿದರೂ ಇನ್ನೂ ರಾಜ್ಯ ನಾಯಕರಿಗೆ ಬುಲಾವ್ ನೀಡದೇ ಇರುವುದು ಡಿಕೆಶಿ ಬಣದ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದಕ್ಕೆ ತಕ್ಕಂತೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿಂದತಾಗಿದೆ.
ಪಂಚ ರಾಜ್ಯಗಳ ಚುನಾವಣೆಯೂ ಹತ್ತಿರದಲ್ಲಿದ್ದು ಈ ಹಂತದಲ್ಲೇ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರವಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಬಜೆಟ್ ಕೂಡಾ ಹತ್ತಿರ ಬರುತ್ತಿದ್ದು ದಾಖಲೆ ಬಜೆಟ್ ಮಂಡಿಸಿದ ಬಳಿಕ ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟುಕೊಡಲು ಮನಸ್ಸು ಮಾಡಬಹುದು ಎಂದು ಡಿಕೆಶಿ ಬಣ ಲೆಕ್ಕಾಚಾರ ಹಾಕಿರಬಹುದು. ಈ ಎಲ್ಲಾ ಕಾರಣಕ್ಕೆ ಈಗ ಮತ್ತೆ ಸಿಎಂ ಬದಲಾವಣೆ ವಿಚಾರ ಗರಿಗೆದರಿದೆ.