ಬೆಂಗಳೂರು: ನಾನು ಹೇಳಿದ್ದ ಎರಡು ಡೇಟ್ ಮಿಸ್ ಆಗಿದೆ. ಆದರೆ ಈ ಬಾರಿ ಮಿಸ್ ಆಗಲ್ಲ ಎಂದು ಡಿಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಪುತ್ರ ಯತೀಂದ್ರ ನಮ್ಮ ತಂದೆಯವರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ. ಹೈಕಮಾಂಡ್ ಯಾರ ಒತ್ತಡಕ್ಕೂ ಮಣಿದಿಲ್ಲ ಎಂದಿದ್ದಾರೆ.
ಯತೀಂದ್ರ ಹೇಳಿಕೆ ಈಗ ಡಿಕೆಶಿ ಬಣದ ಶಾಸಕರನ್ನು ಕೆರಳಿಸಿದೆ. ಯತೀಂದ್ರ ಮಾತಿಗೆ ಕೌಂಟರ ಕೊಟ್ಟಿರುವ ಇಕ್ಬಾಲ್ ಹುಸೇನ್, ನಾನು ಈ ಹಿಂದೆ ಹೇಳಿದ್ದ ಎರಡು ಡೇಟ್ ಮಿಸ್ ಆಗಿದೆ. ಆದರೆ ಮೂರನೇ ಡೇಟ್ ಮಿಸ್ ಆಗಲ್ಲ. ಇದೇ ಅವಧಿಯಲ್ಲೇ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದಿದ್ದಾರೆ.
ಯತೀಂದ್ರ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ಮಾಧ್ಯಮಗಳು ಹೇಳಿದ ಮೇಲೇ ನನಗೆ ಗೊತ್ತಾಗಿರೋದು. ಅದಕ್ಕೆ ಶೀಘ್ರದಲ್ಲೇ ಉತ್ತರ ಕೊಡ್ತೀವಿ ಎಂದಿದ್ದಾರೆ. ನಾನು ನನ್ನ ಮಾತಿಗೆ ಬದ್ಧವಾಗಿರುತ್ತೇನೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲೇ ಬೇಕು. ನಾನು ಮಾತ್ರವಲ್ಲ 80 ರಿಂದ 90 ಶಾಸಕರು ಒಲವನ್ನು ತೋರಿಸಿದ್ದಾರೆ. ಆ ನಿಟ್ಟಿನಲ್ಲಿ ಅವರು ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂದಿದ್ದಾರೆ.