Publish Date: Wed, 23 Jan 2019 (16:45 IST)
Updated Date: Wed, 23 Jan 2019 (16:47 IST)
ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆ ನಾಡಿಗೆ ನಾಡೇ ದುಃಖದ ಮಡುವಿನಲ್ಲಿದೆ. ಭಕ್ತರಂತೂ ದಿಗ್ಭ್ರಾಂತರಾಗಿದ್ದಾರೆ. ಎಲ್ಲೆಡೆ ಶ್ರದ್ಧಾಂಜಲಿ ಕಾರ್ಯಕ್ರಮ ಸೇರಿದಂತೆ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿಯಲಾಗುತ್ತಿದೆ. ಇಂತಹ ದುಃಖದ ಸನ್ನಿವೇಶಕ್ಕೆ ನಾಗರಹಾವೊಂದು ಕಂಬನಿ ಮಿಡಿದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ತುಮಕೂರು ಸಿದ್ಧಗಂಗಾ ಶ್ರೀ ಗಳ ಬ್ಯಾನರ್ ಮುಂದೆ ನಿಂತು ನಾಗರಹಾವು ನಮಿಸಿರುವ ಫೋಟೋ ಫುಲ್ ವೈರಲ್ ಆಗಿದೆ. ಚನ್ನಗಿರಿ ತಾಲೂಕಿನ ನಾಗೇನಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗ ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಗಳ ಭಕ್ತರು, ಗ್ರಾಮದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀಗಳಿಗೆ ಭಕ್ತಿ ಪೂರ್ವಕವಾಗಿ ಶ್ರದ್ಧಾಂಜಲಿ ಮತ್ತು ನಮನ ಸಲ್ಲಿಸಲಾಯಿತು. ಆ ಬಳಿಕ ಸ್ಥಳಕ್ಕಾಗಮಿಸಿದ ನಾಗರ ಹಾವು ಸಿದ್ಧಗಂಗಾ ಶ್ರೀಗಳ ಭಾವಚಿತ್ರದ ಮುಂದೆ ಒಂದು ಗಂಟೆಗೂ ಅಧಿಕ ಕಾಲ ನಿಂತಿತು. ಶ್ರೀಗಳ ಭಾವಚಿತ್ರದ ಮುಂದೆ ನಿಂತು ನಮಿಸಿದೆ ಎನ್ನಲಾಗಿದೆ.