Publish Date: Mon, 28 Feb 2022 (12:12 IST)
Updated Date: Mon, 28 Feb 2022 (12:38 IST)
ಚಿಕ್ಕಬಳ್ಳಾಪುರ : ಖಾಸಗಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ತಂದೆ, ತಾಯಿ ಹಾಗೂ ಮಗ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ನಡೆದಿದೆ.
ಬೆಂಗಳೂರು ಮೂಲದ ದಂಪತಿ ಗೌಸ್(37), ಅಮ್ಮಾಜಾನ್(33) ಹಾಗೂ ಇವರ ಮಗ ರಿಯಾನ್(13) ಮೃತರು. ಗೌಸ್ ಮೂಲತಃ ಹೊಸಪೇಟೆಯವರು ಹಾಗೂ ಅಮ್ಮಾಜಾನ್ ಆಂಧ್ರಪ್ರದೇಶದ ಕದಿರಿಯದವರು. ಇವರು ಮದುವೆಯಾದ ನಂತರ ಬೆಂಗಳೂರಿಗೆ ಬಂದು ವಾಸ ಮಾಡುತ್ತಿದ್ದರು.
ಇಂದು ಬೆಳಗ್ಗೆ ಗೌಸ್, ಅಮ್ಮಾಜಾನ್ ಹಾಗೂ ಮಗ ರಾಯಾನ್ ಮೂವರು ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಸ್ಕೂಟಿಯಲ್ಲಿ ಅಮ್ಮಾಜಾನ್ ಅವರ ತಂಗಿ ಮನೆ ಕದಿರಿಗೆ ಹೊರಟಿದ್ದರು. ಮಾರ್ಗಮಧ್ಯೆ ಫೋಟೋಸ್ ತೆಗೆದುಕೊಂಡು, ರೀಲ್ಸ್ ಮಾಡಿಕೊಂಡು ಸ್ಕೂಟಿಯಲ್ಲಿ ಜಾಲಿಟ್ರಿಪ್ ಮಾಡುತ್ತಿದ್ದರು.
ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಬಳಿ ಬೆಂಗಳೂರು ಕಡೆಯಿಂದ ಬರುತ್ತಿದ್ದವರು ತಿಂಡಿ ತಿನ್ನಲು ರಸ್ತೆ ಬದಿಯಲ್ಲಿರುವ ಹೋಟೆಲ್ಗೆ ಬೈಕ್ ತಿರುಗಿಸಿದ್ದಾರೆ. ಹೋಟೆಲ್ನಲ್ಲಿ ತಿಂಡಿ ತಿಂದು ಮರಳಿ ಬಾಗೇಪಲ್ಲಿ ಕಡೆಗೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಆದರೆ ಅಷ್ಟರಲ್ಲೇ ಬಾಗೇಪಲ್ಲಿ ಕಡೆಯಿಂದ ಬಂದ ಖಾಸಗಿ ಬಸ್ ಸ್ಕೂಟಿ ಮೇಲೆ ಎರಗಿದೆ.
ಅಪಘಾತ ನಂತರ ಬಸ್ ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಅಪಘಾತ ಮುನ್ನ ದಂಪತಿ ಮಗನ ಸಮೇತ ಮಾಡಿತೋ ರೀಲ್ಸ್, ಫೋಟೋಸ್ ನೋಡಿದ್ರೆ ಅಯ್ಯೋ ಪಾಪ ಅನಿಸದೆ ಇರದು. ಚಿಕ್ಕಬಳ್ಳಾಪುರ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.