Publish Date: Tue, 21 Jan 2025 (20:10 IST)
Updated Date: Tue, 21 Jan 2025 (20:15 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬಣ ಹಾಕುತ್ತಿರುವ ರಾಜಕೀಯ ಪಟ್ಟುಗಳಿಗೆ ಸುಸ್ತಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ತಾವು ಎಷ್ಟೇ ತಿಪ್ಪರಲಾಗ ಹಾಕಿದರೂ ಮುಖ್ಯಮಂತ್ರಿ ಕುರ್ಚಿ ದಕ್ಕುವುದಿಲ್ಲ ಎನ್ನುವ ಕಹಿ ಸತ್ಯ ಅರ್ಥ ಮಾಡಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಆದರೂ ಪಾಪ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ 'ತ್ಯಾಗ'ದ ಮಾತುಗಳನ್ನು ಆಡುವ ಮೂಲಕ ತಮ್ಮನ್ನ ತಾವೇ ಸಂತೈಸಿಕೊಳ್ಳುತ್ತಿರುವ ಡಿಸಿಎಂ ಸಾಹೇಬರ ಪರಿಸ್ಥಿತಿ ನೋಡಿದರೆ ಕನಿಕರ ಮೂಡುತ್ತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಈಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷೀಯ ಸ್ಥಾನ ಹಾಗೂ ಸಿಎಂ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣದ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ.
ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಚ್ಚರಿಕೆ ನೀಡಿ ಕಾಂಗ್ರೆಸ್ ನಾಯಕರಿಗೆ ಬಾಯಿ ಬಂದ್ ಮಾಡಿದ್ದರು. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಪಕ್ಷಕ್ಕಾಗಿ ಮೊದಲಿನಿಂದಲೂ ಹಲವಾರು ಬಾರಿ ತ್ಯಾಗ ಮಾಡಿದ್ದೇನೆ ಎಂದು ತ್ಯಾಗದ ಮಾತನಾಡಿದ್ದರು.
ಈ ವಿಚಾರವಾಗಿ ಡಿಕೆ ಶಿವಕುಮಾರ್ ಅವರನ್ನು ಆರ್ ಅಶೋಕ್ ಕಾಲೆಳೆದಿದ್ದಾರೆ.