Publish Date: Wed, 29 Apr 2020 (16:05 IST)
Updated Date: Wed, 29 Apr 2020 (16:07 IST)
ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ನಿರ್ಬಂಧ ಮುಂದುವರೆಸಲಾಗಿದ್ದರೆ, ಧಾರವಾಡದಲ್ಲಿ ಕೊಂಚ ರಿಲೀಫ್ ನೀಡಲಾಗಿದೆ.
ಧಾರವಾಡ ಜಿಲ್ಲೆಯು ಕಿತ್ತಳೆ ವಲಯದಲ್ಲಿದೆ. ಹುಬ್ಬಳ್ಳಿ ಶಹರ ಹೊರತುಪಡಿಸಿ, ಧಾರವಾಡ ನಗರದಲ್ಲಿ ಕೆಲವು ಷರತ್ತುಗಳೊಂದಿಗೆ ಹಾಗೂ ಜಿಲ್ಲೆಯಾದ್ಯಂತ ಇತರ ತಾಲ್ಲೂಕುಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಸೂಕ್ತ ಆರೋಗ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಇದರ ಸದುಪಯೋಗ ಪಡೆಯಬೇಕು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿ ಶಹರದಲ್ಲಿ ಮಾತ್ರ ಕೋವಿಡ್ ಸಕ್ರಿಯ ಪ್ರಕರಣಗಳು ಇವೆ. ಹುಬ್ಬಳ್ಳಿ ಶಹರದಲ್ಲಿ ಪ್ರಸ್ತುತ ಇರುವ ಎಲ್ಲಾ ನಿರ್ಬಂಧಗಳು ಯಥಾರೀತಿಯಲ್ಲಿ ಮುಂದುವರೆಯಲಿವೆ. ಧಾರವಾಡದಲ್ಲಿ ಪ್ರಾರಂಭದಲ್ಲಿ ಕಾಣಿಸಿಕೊಂಡಿದ್ದ ಒಂದು ಕೋವಿಡ್ ಪ್ರಕರಣ ಗುಣಮುಖವಾಗಿದೆ. ಈ ಕಾರಣಕ್ಕಾಗಿ ಧಾರವಾಡ ನಗರದಲ್ಲಿ ಮಾತ್ರ ಸೋಮವಾರ, ಮಂಗಳವಾರ , ಬುಧವಾರ ಹಾಗೂ ಗುರುವಾರ ದಿನಗಳಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಂಗಡಿ ಮತ್ತು ಮುಂಗಟ್ಟುಗಳ ಕಾಯ್ದೆ ( ಶಾಪ್ಸ್ ಮತ್ತು ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್) ಪ್ರಕಾರ ನೋಂದಣಿಯಾಗಿರುವ ಕೃಷಿ ಮತ್ತು ಕೈಗಾರಿಕೆ ಪೂರಕವಾಗಿರುವ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.