Publish Date: Mon, 03 Oct 2022 (20:41 IST)
Updated Date: Mon, 03 Oct 2022 (20:43 IST)
ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಇದೀಗ ಕರ್ನಾಟಕದಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ತಮಿಳುನಾಡಿನ ಗಡಿ ಮೂಲಕ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಬಂದ ಅವರು ಈಗ ಮೈಸೂರು ಜಿಲ್ಲೆಯಲ್ಲಿ ತಮ್ಮ ತಂಡದೊಂದಿಗೆ ಪಾದಯಾತ್ರೆ ಮುಂದುವರಿಸಿದ್ದಾರೆ. ಇದರ ಮಧ್ಯೆ ಭಾನುವಾರದಂದು ರಾಹುಲ್ ಗಾಂಧಿಯವರು ಸುರಿಯುತ್ತಿರುವ ಮಳೆಯಲ್ಲಿ ಭಾಷಣ ಮಾಡಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಂಡಿಪಾಳ್ಯ ಸಮೀಪ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದರು. ನಈ ಫೋಟೋವನ್ನು ಮಾಜಿ ಸಂಸದೆ, ನಟಿ ರಮ್ಯಾ ಕೂಡ ಶೇರ್ ಮಾಡಿದ್ದು ಸುರಿಯುತ್ತಿರುವ ಮಳೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುತ್ತಿರುವುದು ಸುದ್ದಿಯಲ್ಲ ಅಂದಿದ್ದಾರೆ. ಅಷ್ಟಕ್ಕೂ ಹೀಗೆ ಹೇಳಲು ಕಾರಣ ಅಂತಹ ಮಳೆಯಲ್ಲೂ ಸಾವಿರಾರು ಸಂಖ್ಯೆಯಲ್ಲಿ ಜನ ಸಹ ತಾಳ್ಮೆಯಿಂದ ಭಾಷಣ ಕೇಳಿಸಿಕೊಳ್ಳುತ್ತಿರುವುದು ರಮ್ಯಾ ಅವರ ಗಮನ ಸೆಳೆದಿದೆ. ಹೀಗಾಗಿ ಇದನ್ನು ಹಂಚಿಕೊಂಡಿರುವ ರಮ್ಯಾ ರಾಹುಲ್ ಗಾಂಧಿಯವರನ್ನು ಪರೋಕ್ಷವಾಗಿ ಹೊಗಳಿದ್ದಾರೆ.