Publish Date: Tue, 09 Dec 2025 (16:52 IST)
Updated Date: Tue, 09 Dec 2025 (16:54 IST)
ಬೆಳಗಾವಿ: ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದ ಒಳಗೆಯೂ ಹೋರಾಟ ಮಾಡುವುದಾಗಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ರೈತವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ರೈತರ ಧ್ವನಿ ಸುವರ್ಣಸೌಧ, ವಿಧಾನಸೌಧವನ್ನು ಮುಟ್ಟಬೇಕು ಎಂದು ಆಶಿಸಿದರು. ವಿಧಾನಸಭೆ ಒಳಗೆಯೂ ಹೋರಾಟ ಮುಂದುವರೆಯಲಿದೆ ಎಂದು ಅವರು ನುಡಿದರು. ಕರ್ನಾಟಕದಲ್ಲಿ ಸರಕಾರ ಇಲ್ಲ; ಅದು ಸತ್ತುಹೋಗಿದೆ ಎಂದು ಅವರು ಟೀಕಿಸಿದರು.
ಇದು ರೈತವಿರೋಧಿ ಸರಕಾರ- ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ರಾಜ್ಯದ ಅನೇಕ ಪ್ರದೇಶಗಳು ಅತಿವೃಷ್ಟಿಗೆ ತುತ್ತಾಗಿ ಬೆಳೆ ನಾಶವಾಗಿದೆ. ಹತ್ತಿ, ತೊಗರಿ, ಉದ್ದು ಇಲ್ಲ ಎಂಬಂತಾಗಿದೆ. ಸರಕಾರ ರೈತರ ಸಮಸ್ಯೆಗಳನ್ನು ಕೇಳಿ ಅದನ್ನು ಪರಿಹರಿಸಬೇಕಿತ್ತು. ಆದರೆ, ರೈತ ವಿರೋಧಿ ಸರಕಾರ ಹೀಗೇ ನಡೆದುಕೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು. ಬಿಜೆಪಿ ತಂಡಗಳನ್ನು ರೂಪಿಸಿ ಪ್ರವಾಸ ಮಾಡಿತ್ತು ಎಂದು ನೆನಪಿಸಿದರು.
ರೈತರ ಸಮಸ್ಯೆ ಪರಿಹರಿಸಿ- ಎನ್.ರವಿಕುಮಾರ್
ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಮಾತನಾಡಿ, ರೈತರ ಸಮಸ್ಯೆಗಳನ್ನು ಸಿದ್ದರಾಮಯ್ಯ ಸರಕಾರ ಪರಿಹರಿಸಬೇಕು; ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ ಎಂದು ತಿಳಿಸಿದರು. ರೈತರ ಸಂಕಷ್ಟ ಮುಂದುವರೆದಿದೆ. ರಾಜ್ಯವು ರೈತರ ಆತ್ಮಹತ್ಯೆಯಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಕಳವಳ ವ್ಯಕ್ತಪಡಿಸಿದರು. ರೈತರ ಸಂಕಷ್ಟವನ್ನು ಪರಿಹರಿಸುವಂತೆ ಆಗ್ರಹಿಸಿದರು.