Publish Date: Wed, 03 Nov 2021 (20:53 IST)
Updated Date: Wed, 03 Nov 2021 (20:57 IST)
ಬೆಂಗಳೂರು: ದಿವಂಗತ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಅಗಲಿಕೆಯ ನೋವನ್ನು ಚಿತ್ರರಂಗ ತಡೆದುಕೊಳ್ಳಲು ಆಗುತ್ತಿಲ್ಲ ಈ ನಡುವೆಯೂ ಕರ್ನಾಟಕ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಜಂಟಿಯಾಗಿ ಪುನೀತ್ ನಮನ ಎನ್ನುವ ಕಾರ್ಯಕ್ರಮವನ್ನು ನೆಡೆಸಿಕೊಡಲು ಮುಂದಾಗಿದೆ.
ದಿವಂಗತ ನಟ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಅಕಾಲಿಕ ಮರಣವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 16ಕ್ಕೆ ಪುನೀತ್ ನಮನ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯಕ್ರಮ ಪ್ಯಾಲೆಸ್ ಗ್ರೌಂಡ್ ನ ಒಳಾಂಗಣ ವೇದಿಕೆಯಲ್ಲಿ ನಡೆಯಲಿದೆ ಎಂದು ವಾಣಿಜ್ಯ ಮಂಡಳಿಯ ಮೂಲಗಳು ತಿಳಿಸಿವೆ.
ಬೃಹತ್ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದು, ಈಗಾಗಲೇ ವಾಣಿಜ್ಯ ಮಂಡಳಿ ಆಹ್ವಾನ ಪತ್ರಿಕೆ ನೀಡಲು ತಯಾರಿ ನೆಡೆಸಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ವೈ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿ ಹಲವರಿಗೆ ಆಮಂತ್ರಣ ನೀಡಲಿದೆ. ದಕ್ಷಿಣ ಭಾರತದ ಕಲಾವಿದರು, ತಂತ್ರಜ್ಞರಿಗೂ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಆಂಧ್ರ ಹಾಗೂ ತಮಿಳುನಾಡಿನ ಫಿಲ್ಮ್ ಚೇಂಬರ್ ಪದಾಧಿಕಾರಿಗಳು, ಕಲಾವಿದರು ಭಾಗಿಯಾಗಲಿದ್ದಾರೆ.