Publish Date: Mon, 11 Mar 2024 (09:43 IST)
Updated Date: Mon, 11 Mar 2024 (09:50 IST)
ಬೆಂಗಳೂರು: ಮೈಸೂರಿನಿಂದ ಈ ಬಾರಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ನೀಡಲ್ಲ ಎಂಬ ವರದಿಗಳು ಈಗ ಜೋರಾಗಿ ಹರಿದಾಡುತ್ತಿದೆ. ಇದು ಪ್ರತಾಪ್ ಸಿಂಹ ಅಭಿಮಾನಿಗಳನ್ನು ಕೆರಳಿಸಿದೆ.
ಬಿಜೆಪಿಯಲ್ಲಿ ಏನೂ ಕೆಲಸ ಮಾಡದೇ ಇದ್ದರೂ, ಬೇರೆ ಪಕ್ಷಕ್ಕೆ ಹೋಗಿ ಬಂದವರಿಗೂ ಕಾಡಿ ಬೇಡಿ ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಿ ಸನ್ಮಾನ ಮಾಡಲಾಗುತ್ತಿದೆ. ಆದರೆ ತನಗೆ ಸಿಕ್ಕ ಅಧಿಕಾರಾವಧಿಯಲ್ಲಿ ಕ್ಷೇತ್ರದ ಪರ ಯಾರ ಹಂಗೂ ಇಲ್ಲದೇ ಕೆಲಸ ಮಾಡಿಕೊಂಡು, ಜನರ ಪ್ರೀತಿ ಗಳಿಸುವ ನಾಯಕನನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ರೋಶ ಕೇಳಿಬರುತ್ತಿದೆ.
ಪ್ರತಾಪ್ ಸಿಂಹಗೆ ಟಿಕೆಟ್ ನಿರಾಕರಣೆ ಅವರ ಅಭಿಮಾನಿ ಬಳಗದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪನವರೇ ಪ್ರತಾಪ್ ಸಿಂಹಗೆ ಟಿಕೆಟ್ ನೀಡದಂತೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಪ್ರತಾಪ್ ಸಿಂಹಗೆ ರಾಜ್ಯ ನಾಯಕರ ಜೊತೆಗೆ ಮೊದಲಿನಿಂದಲೂ ಸಂಬಂಧ ಅಷ್ಟಕ್ಕಷ್ಟೇ. ಆದರೆ ಕೇಂದ್ರ ನಾಯಕರ ಗಮನ ಸೆಳೆಯಲು ಅವರು ಯಶಸ್ವಿಯಾಗಿದ್ದರು. ಹೀಗಾಗಿ ಪ್ರತಾಪ್ ಸಿಂಹರನ್ನು ಕೈ ಬಿಡಲು ಸ್ವತಃ ಅಮಿತ್ ಶಾಗೇ ಇಷ್ಟವಿಲ್ಲ ಎನ್ನಲಾಗುತ್ತಿದೆ. ಪ್ರತಾಪ್ ಸಿಂಹಗೆ ಟಿಕೆಟ್ ನೀಡದೇ ಇರಲು ಸ್ವತಃ ಅಮಿತ್ ಶಾ ಅವರಿಗೇ ಸಹಮತವಿಲ್ಲ ಎನ್ನಲಾಗಿದೆ. ಹೈಕಮಾಂಡ್ ಗೇ ಈ ವಿಚಾರದಲ್ಲಿ ಒಪ್ಪಿಗೆಯಿಲ್ಲದ ಮೇಲೆ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪುವ ಪ್ರಶ್ನೆಯೇ ಇಲ್ಲ ಎಂಬುದು ಅವರ ಬೆಂಬಲಿಗರ ವಾದ.