Publish Date: Sun, 10 Mar 2024 (08:48 IST)
Updated Date: Sun, 10 Mar 2024 (08:52 IST)
ಬೆಂಗಳೂರು: ದೇವಾಲಯದ ಹುಂಡಿಗೆ ಹಣ ಹಾಕುವುದು ಅಸಹ್ಯಕರ. ಆದರೆ ಮುಸ್ಲಿಮರ ರಂಜಾನ್, ಹಜ್ ದಾನದ ಸಂದೇಶ ನೀಡುತ್ತದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಕುಂ. ವೀರಭದ್ರಪ್ಪ ಇಂತಹದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇವಾಲಯದ ಹುಂಡಿಗೆ ಹಣ ಹಾಕುವುದು ನಮ್ಮ ಪಾಪ ಕರ್ಮದ ಪ್ರಾಯಶ್ಚಿತ ಮಾಡುವುದಕ್ಕಾಗಿ ಅಷ್ಟೇ ಎಂದು ಅವರು ಹೇಳಿದ್ದಾರೆ. ಆದರೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಇದಿಲ್ಲ ಎಂದು ಹೊಗಳಿದ್ದಾರೆ.
ದೇವರ ಹುಂಡಿಗೆ ಹಣ ಹಾಕುವುದು ನಮ್ಮ ಪಾಪವನ್ನು ರಿನಿವಲ್ ಮಾಡಿದಂತೆ. ನಾನು ಇಷ್ಟೊಂದು ಪಾಪ, ಭ್ರಷ್ಟಾಷಾರ, ಜನರನ್ನು ಹಾಳು ಮಾಡಿದ್ದೇನೆ. ದಯವಿಟ್ಟು ಇದನ್ನು ಮನ್ನಿಸು. ಹೊಸದಾಗಿ ಪಾಪ ಕೆಲಸ ಮಾಡಲು ಅವಕಾಶ ಮಾಡಿಕೊಡು ಎಂದು ಕೇಳಿದಂತೆ ಎಂದಿದ್ದಾರೆ.
ರೋಜಾ, ಹಜ್, ರಂಜಾನ್ ಹಬ್ಬ ಇನ್ನೇನು ಬರುತ್ತದೆ. ಇದು ದಾನ ಮಾಡುವ ಸಂದೇಶ ನೀಡುತ್ತದೆ. ಯೇಸು ಕ್ರಿಸ್ತ ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ಕಪಾಳ ತೋರಿಸು ಎಂದ. ಆದರೆ ತಿರುಪತಿಯಲ್ಲಿ ನಡೆಯುವುದು ಅಸಹ್ಯಕರವಾದದ್ದು ಎಂದು ವೀರಭದ್ರಪ್ಪ ಹೇಳಿದ್ದಾರೆ.
ದೇವರ ಹುಂಡಿಗೆ ಕೋಟಿಗಟ್ಟಲೆ ಬಂಗಾರ, ಹಣ ಹಾಕುವುದು ಅಸಹ್ಯಕರ. ಇದರ ಬಗ್ಗೆ ನಾನು ಹೆಚ್ಚು ಹೇಳಿದರೆ ಹಿಂದೂ ವಿರೋಧಿ, ಮುಸ್ಲಿಮರ ಪರವಿದ್ದೇನೆ ಎಂದು ಹಣೆಪಟ್ಟಿ ಕಟ್ಟುತ್ತಾರೆ. ದೇವರ ಹುಂಡಿಗೆ ಹಾಕುವ ಬದಲು ಬಡವರಿಗೆ ದಾನ ಮಾಡಿ ಎಂದು ಹೇಳಿದರು. ಅವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.