Publish Date: Sat, 09 Mar 2024 (12:37 IST)
Updated Date: Sat, 09 Mar 2024 (12:53 IST)
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಮೊದಲ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸುತ್ತಿದ್ದಾರೆ. ಆದರೆ ಅವರಿಗೆ ಎದುರಾಳಿಯಾಗಿ ಡಾ ಸಿಎನ್ ಮಂಜುನಾಥ್ ಸ್ಪರ್ಧಿಸುವ ಸಾಧ್ಯತೆಯಿದೆ.
ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ. ಜೊತೆಗೆ ಅಣ್ಣ ಡಿಕೆ ಶಿವಕುಮಾರ್ ಬೆಂಬಲವಿದೆ. ಕಾಂಗ್ರೆಸ್ ನ ಪ್ರಭಾವೀ ನಾಯಕ ಡಿಕೆ ಸುರೇಶ್. ಹೀಗಾಗಿ ಅವರನ್ನು ಕಟ್ಟಿಹಾಕಲು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಿದೆ. ಹೀಗಾಗಿ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸಲು ತಯಾರಿ ನಡೆಸಿದೆ.
ಈಗಾಗಲೇ ಡಾ ಮಂಜುನಾಥ್ ಬಳಿ ಸ್ಪರ್ಧಿಸಲು ಜೆಡಿಎಸ್ ನಾಯಕರು ತೀವ್ರ ಒತ್ತಾಯ ಹೇರಿದ್ದಾರೆ. ಬಿಜೆಪಿ ಹೈಕಮಾಂಡ್ ಕೂಡಾ ಮಂಜುನಾಥ್ ಅವರಿಗೆ ಟಿಕೆಟ್ ನೀಡಲು ಉತ್ಸುಹಕವಾಗಿದೆ. ಜನರ ನಡುವೆ ಅವರಿಗಿರುವ ವರ್ಚಸ್ಸು, ಜನಪ್ರಿಯತೆ ಪಕ್ಷಕ್ಕೆ ಲಾಭವಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.
ಡಿಕೆ ಸುರೇಶ್ ರನ್ನು ಸೋಲಿಸುವುದು ಬಿಜೆಪಿಗೂ ಪ್ರತಿಷ್ಠೆಯ ವಿಚಾರ. ಇತ್ತೀಚೆಗೆ ಕೇಂದ್ರ ಸರ್ಕಾರದ ವಿರುದ್ಧ ಟ್ಯಾಕ್ಸ್ ಮೂವ್ ಮೆಂಟ್ ಗೆ ಪರೋಕ್ಷವಾಗಿ ಕಾರಣವಾಗಿದ್ದು ಡಿಕೆ ಸುರೇಶ್ ನೀಡಿದ್ದ ದಕ್ಷಿಣ ಭಾರತ ಪ್ರತ್ಯೇಕತೆಯ ಹೇಳಿಕೆ. ಹೀಗಾಗಿ ಅವರನ್ನು ಸೋಲಿಸಲು ಯಾವುದೇ ಕಳಂಕವಿಲ್ಲದ ಜನಪ್ರಿಯ ವ್ಯಕ್ತಿಯನ್ನೇ ಕರೆತರುವುದು ಬಿಜೆಪಿ-ಜೆಡಿಎಸ್ ರಣತಂತ್ರವಾಗಿದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎನ್ ಡಿಎ ಅಭ್ಯರ್ಥಿಯಾಗಿ ಡಾ. ಸಿಎನ್ ಮಂಜುನಾಥ್ ಕಣಕ್ಕಿಳಿಯುವ ಸಾಧ್ಯತೆಯಿದೆ.