Publish Date: Tue, 07 Jun 2022 (14:04 IST)
Updated Date: Tue, 07 Jun 2022 (14:06 IST)
ಬೆಳಗಾವಿ : ನಳಿನ್ ಕುಮಾರ್ ಕಟೀಲ್ ಬಿಜೆಪಿ ಅಧ್ಯಕ್ಷರಾಗುವುದಕ್ಕೆ ಲಾಯಕ್ ಅಲ್ಲ. ಕಟೀಲ್ ಪ್ರಭುದ್ಧ ರಾಜಕಾರಣಿ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಟೀಲ್ ರಾಜಕೀಯವಾಗಿ ನಮ್ಮ ವಿರೋಧಿಗಳು. ಅವರು ಹೇಳಿದ್ದು ಸತ್ಯ ಅಂತಾ ನಾವು ನಂಬಬೇಕಾ? ಕಟೀಲ್ ಆಧಾರ ರಹಿತ ಆರೋಪವನ್ನು ಮಾಡುತ್ತಿದ್ದಾರೆ.
ಕಟೀಲ್ ಸುಳ್ಳು ಹೇಳುತ್ತಿದ್ದಾರೆ. ಅವರು ಬಿಜೆಪಿ ಅಧ್ಯಕ್ಷರಾಗುವುದಕ್ಕೆ ಲಾಯಕ್ ಅಲ್ಲ. ಬಾಯಿಗೆ ಏನ್ ಏನು ಬರುತ್ತದೋ ಅದನ್ನು ಬಂದ ಹಾಗೇ ಮಾತನಾಡುತ್ತಾರೆ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಏಕೆಂದರೆ ಕಟೀಲ್ ಪ್ರಭುದ್ಧ ರಾಜಕಾರಣಿ ಅಲ್ಲ ಎಂದು ಟಾಂಗ್ ನೀಡಿದರು.
ಮೋದಿ ಸಾಧನೆ ನೋಡಿ ಬಿಜೆಪಿಗೆ ಮತ ಹಾಕುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪೆಟ್ರೋಲಿಯಂ ಬೆಲೆ ಹೆಚ್ಚಾಗಿರುವುದು ಒಳ್ಳೆಯದಾ? ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಅದು ಒಳ್ಳೆಯದಾ? ಜನರನ್ನು ಸಾಲದ ಸುಳಿಗೆ ಸಿಲುಕಿದ್ದು ಒಳ್ಳೆಯದಾ ಎಂದು ಪ್ರಶ್ನಿಸಿದರು.
ದೇಶದಲ್ಲಿ ಸಾಲದ ಪ್ರಮಾಣ ತೀವ್ರ ಹೆಚ್ಚಳವಾಗಿದೆ. ಪಠ್ಯ ಪುಸ್ತಕದಲ್ಲಿ ಉದ್ದೇಶ ಪೂರ್ವಕವಾಗಿ ಅನೇಕ ತಪ್ಪು ಮಾಡಿದ್ದಾರೆ. ಅಂಬೇಡ್ಕರ್ ಬಗ್ಗೆ ಚರಿತ್ರೆಯ ಅಗತ್ಯತೆ ಇದೆ. ಸಂವಿಧಾನ ಶಿಲ್ಪಿ ಎನ್ನುವುದನ್ನು ತೆಗೆದು ಹಾಕಿದರೆ ಹೇಗೆ? ಕುವೆಂಪು ಫೋಟೋ ತೆಗೆದು ಹಾಕಿದರೆ ಅವಮಾನ ಅಲ್ಲವೇ? ನಾರಾಯಣಗುರು, ಬಸವಣ್ಣ, ಸುರಪುರ ನಾಯಕರನ್ನು ಅವಮಾನ ಮಾಡಿ ಪಠ್ಯವನ್ನು ಕೇಸರಿಕರಣ ಮಾಡಲು ಹೋರಟಿದ್ದಾರೆ ಎಂದು ಕಿಡಿಕಾರಿದರು.