Publish Date: Sat, 11 Jun 2022 (14:20 IST)
Updated Date: Sat, 11 Jun 2022 (14:22 IST)
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ತಮ್ಮ ತಂತ್ರಗಾರಿಕೆಯ ಮೂಲಕ ಮೂವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ.
"ಮೂವರನ್ನು ರಾಜ್ಯಸಭೆಗೆ ಕಳುಹಿಸುವಲ್ಲಿ ತಾವು ಪಟ್ಟ ಪ್ರಯತ್ನ ಅಮೂಲ್ಯವಾದದ್ದು ಕರ್ನಾಟಕ ರಾಜ್ಯದ ಈ ಕೊಡುಗೆ ಇನ್ನಷ್ಟು ಅತ್ಯುತ್ತಮವಾಗಿ ಕೆಲಸ ಮಾಡುವಂತಾಗಲಿ ಎಂದು ಪ್ರಧಾನಿ ಮೋದಿಯವರು ಬೊಮ್ಮಾಯಿ ಅವರನ್ನು ಪ್ರೋತ್ಸಾಹಿಸಿ, ಶ್ಲಾಘಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದರು. ನೀವು ಇದಕ್ಕಾಗಿ ಪಟ್ಟ ಶ್ರಮ ಇಂದು ಸಾರ್ಥಕವಾಗಿದೆ. ಎಲ್ಲ ತಂತ್ರಗಳು ಫಲಿಸಿವೆ ಎಂದು ನಡ್ಡಾ ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಮುಖ್ಯ ಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಜಯಗಳಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಅಲ್ಪ ಮತಗಳ ಕೊರತೆ ಇದ್ದರೂ ತಾಂತ್ರಿಕವಾಗಿ ಮೂವರು ಬಿಜೆಪಿ ಅಭ್ಯರ್ಥಿಗಳ ಗೆಲುವನ್ನು ಖಾತ್ರಿ ಪಡಿಸಿದ್ದಕ್ಕಾಗಿ ಶುಭಾಶಯ ಕೋರಿದರು. ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಳಕ್ಕೆ ಕರ್ನಾಟಕದ ಕೊಡುಗೆ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.