Publish Date: Mon, 11 Feb 2019 (19:36 IST)
Updated Date: Mon, 11 Feb 2019 (19:38 IST)
ಆಪರೇಷನ್ ಕಮಲ ಕುರಿತ ಆಡಿಯೋ ಇಂದು ಸದನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.
ರಾಜಕೀಯದಲ್ಲಿ ಅಲ್ಲೋಲ – ಕಲ್ಲೋಲ ಸೃಷ್ಟಿಸಿದ್ದ ಬಿಜೆಪಿ ನಾಯಕರು ಹಾಗೂ ಗುರುಮಿಠಕಲ್ ಶಾಸಕ ಪುತ್ರ ಶರಣಗೌಡನ ಆಡಿಯೋ ವಿಚಾರ ವಿಧಾನಸಭೆಯಲ್ಲಿಂದು ಪ್ರಸ್ತಾಪ ಆಯಿತು. ಆಡಿಯೋ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ 15 ದಿನದಲ್ಲಿ ವರದಿ ಸಲ್ಲಿಸುವಂತೆ ಸಭಾಧ್ಯಕ್ಷ ಕೆ.ಆರ್. ರಮೇಶ್ಕುಮಾರ್ , ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದರು.
ಆಡಿಯೋ ಬಗ್ಗೆ ಪ್ರಸ್ತಾಪಿಸಿ ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಮಾತನಾಡಿದ ಸಭಾಧ್ಯಕ್ಷ ಕೆ.ಆರ್. ರಮೇಶ್ಕುಮಾರ್, ಈ ಆಡಿಯೋ ಬಗ್ಗೆ ಯಾವ ರೀತಿ ತನಿಖೆ ಆಗಬೇಕು. ಈ ಆಡಿಯೋದಲ್ಲಿನ ವಿಚಾರ ಸದನದ ಹಕ್ಕುಚ್ಯುತಿಯೇ, ಇಲ್ಲವೇ ಎಂಬ ಬಗ್ಗೆ ಸದನದಲ್ಲಿ ಸುದೀರ್ಘವಾಗಿ ಸುಮಾರು 2 ಗಂಟೆ ಚರ್ಚೆ ನಡೆದ ನಂತರ ಅಂತಿಮವಾಗಿ ರೂಲಿಂಗ್ ನೀಡಿದರು. ಈ ಆಡಿಯೋ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚಿಸಿ 15 ದಿನದಲ್ಲಿ ತನಿಖಾ ವರದಿಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿಗೆ ಸೂಚಿಸಿದರು.
ಯಾವ ರೀತಿ ತನಿಖೆ ನಡೆಸಬೇಕು, ಕಾನೂನು ವಿಚಾರ, ಇವುಗಳನ್ನೆಲ್ಲಾ ನೀವೇ ಗಣನೆಗೆ ತೆಗೆದುಕೊಂಡು ವಿಶೇಷ ತಂಡದಿಂದ ತನಿಖೆ ಮಾಡಿಸಿ ಎಂದು ಸಭಾಧ್ಯಕ್ಷರು ಹೇಳಿ ಆಡಿಯೋ ಬಗೆಗಿನ ಚರ್ಚೆ ಮುಗಿದಿದೆ ಎಂದರು.