Publish Date: Wed, 15 Dec 2021 (14:15 IST)
Updated Date: Wed, 15 Dec 2021 (14:17 IST)
ಐದು ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಜಮೀನು ಮಾರಾಟ ಮಾಡುವಂತಿಲ್ಲ. ಮಾರಾಟ ಮಾಡಿದರೆ ಫೋಡಿ ಅಥವಾ 11ಇ ನಕ್ಷೆ ದೊರೆಯುವುದಿಲ್ಲ. ಈ ಬಗ್ಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮನಿಶ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ.ಆದರೆ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಿತಿಯನ್ನು 3 ಗುಂಟೆಗೆ ಇಳಿಕೆ ಮಾಡಲಾಗಿದೆ.
ಈ ನಾಲ್ಕು ಜಿಲ್ಲೆಗಳಲ್ಲಿ 3 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಭೂಮಿ ಮಾರಾಟ ಮಾಡಲು ಅವಕಾಶವಿಲ್ಲ. ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 5 ಗುಂಟೆಯನ್ನು ಸರ್ಕಾರ ನಿಗದಿ ಮಾಡಿದೆ. ಕೃಷಿ ಉದ್ದೇಶಕ್ಕೆ ಉಪಯೋಗಿಸುವ ಭೂಮಿಯ ಸರ್ವೆ ನಂಬರ್ಗಳಲ್ಲಿ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಇದಕ್ಕೆ ಕಾರಣ ತುಂಡು-ತುಂಡು ಭೂಮಿ ಮಾರಾಟ ಅಥವಾ ರೆವಿನ್ಯೂ ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ನಗರಾಭಿವೃದ್ಧಿ ಕಾಯ್ದೆಯಡಿ ನಿಯಮಬದ್ಧವಾಗಿ ಅನುಮೋದನೆ ಪಡೆಯದೆ ಕೃಷಿ ಭೂಮಿಗಳನ್ನು ಸೈಟು/ಕಟ್ಟಡಗಳಿಗಾಗಿ (ಕೃಷಿಯೇತರ ಉದ್ದೇಶಗಳಿಗಾಗಿ) ಪರಿವರ್ತಿಸುತ್ತಿದ್ದಾರೆ. ಕೃಷಿ ಉದ್ದೇಶಕ್ಕೆ ಬಳಸುವ ಬದಲು ಸೈಟುಗಳನ್ನಾಗಿ ಬಳಸಲಾಗುತ್ತಿದೆ. ಕಂದಾಯ ಲೇಔಟ್ ನಿರ್ವಿುಸಿ ಗುಂಟೆಗಳ ಲೆಕ್ಕದಲ್ಲಿ ಕೃಷಿ ಭೂಮಿಯನ್ನು ತುಂಡು ಭೂಮಿಯಾಗಿ ಮಾರಾಟ ಮಾಡುತ್ತಿದ್ದಾರೆ.
ಇತ್ತ ಇಂಥ ತುಂಡು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಿಲ್ಲ. ಕಡಿಮೆ ವಿಸ್ತೀರ್ಣ ಹೊಂದಿರುವ ಸರ್ವೆ ನಂಬರ್ಗಳನ್ನು (ಹಿಸ್ಸಾ ನಂಬರ್) ಸೃಷ್ಟಿಸುವುದು ಕಷ್ಟವಾಗಿದೆ. ಅದಕ್ಕಾಗಿ ಇದನ್ನು ತಡೆಯುವ ಉದ್ದೇಶಕ್ಕೆ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡದಂತೆ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಯಾರಿಗೆಲ್ಲ ವಿನಾಯಿತಿ?: ಹೊಸ ಆದೇಶಕ್ಕೂ ಮೊದಲು ಸರ್ವೆ ನಂಬರ್ ಅಥವಾ ಪಹಣಿಗಳಲ್ಲಿ ಕನಿಷ್ಠ ವಿಸ್ತೀರ್ಣಗಿಂತ ಕಡಿಮೆ ವಿಸ್ತೀರ್ಣ ಇದ್ದರೆ ಮುಂದುವರಿಯಲಿದೆ. ಅಂತಹ ಸರ್ವೆ ನಂಬರ್ ಮತ್ತು ಪಹಣಿಗಳು ಮಾನ್ಯವಾಗಿರುತ್ತವೆ. ಒಂದು ವೇಳೆ ಪಿತ್ರಾರ್ಜಿತವಾಗಿ/ಅನುವಂಶಿಕವಾಗಿ ಸ್ವೀಕರಿಸಿದ ಹಕ್ಕುಗಳು ನಿಗದಿತ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಹೊಸ ಪಹಣಿ ಮತ್ತು ಫೋಡಿ ರಚಿಸಬಹುದು. ಜತೆಗೆ ಈಗಾಗಲೇ ಪಹಣಿಗಳಲ್ಲಿ ದಾಖಲಾದ ಮತ್ತು ಅಸ್ತಿತ್ವದಲ್ಲಿ ಇರುವ ಮಾಲೀಕರ ಹಕ್ಕುಗಳ ಪ್ರಕಾರ ಫೋಡಿಯನ್ನು ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇದ್ದರೂ ಅನುಮತಿಸಲಾಗಿದೆ.