Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳ ಉಪಯೋಗಕ್ಕೆ ಹಣ ಎತ್ತಿಟ್ಟು ಮಾದರಿ ಮೆರೆದ ಶಿಕ್ಷಣ ತಜ್ಞ

ವಿದ್ಯಾರ್ಥಿಗಳ ಉಪಯೋಗಕ್ಕೆ ಹಣ ಎತ್ತಿಟ್ಟು ಮಾದರಿ ಮೆರೆದ ಶಿಕ್ಷಣ ತಜ್ಞ
bangalore , ಬುಧವಾರ, 15 ಡಿಸೆಂಬರ್ 2021 (13:56 IST)
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಇತರರು ಕಾರ್ಯ ಮಾಡುತ್ತಾರೆಂದು ನಿರೀಕ್ಷಿಸುವುದಿಲ್ಲ. ತಾವೇ ಸ್ವತಃ ಕೆಲಸ ಮಾಡುತ್ತಾರೆ. ಈ ಶಿಸ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಲಕ್ಷಣ ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಚಾಮರಾಜಪೇಟೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರು ಹಾಗೂ ಶಿಕ್ಷಣ ತಜ್ಞ ಪ್ರೊ. ಪಿ.ವಿ. ಕೃಷ್ಣ ಭಟ್ ಮತ್ತು ಕಮಲಾದೇವಿ ದಂಪತಿಯ ಸಹಸ್ರ ಚಂದ್ರದರ್ಶನ ಶಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರೊ. ಪಿ.ವಿ.ಕೃಷ್ಣಭಟ್ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರು ಆರ್‌ಎಸ್‌ಎಸ್‌ನಲ್ಲಿ ತಾವು ಕಾರ್ಯಕರ್ತರನ್ನು ಬೆಳೆಸಿಲ್ಲ, ಬದಲಿಗೆ ತಾವು ಅವರೊಂದಿಗೆ ಕಾರ್ಯನಿರ್ವಹಿಸಿ ಅವರಿಂದ ಸಾಕಷ್ಟು ಕಲಿತಿದ್ದಾಗಿ ಹೇಳಿದ್ದಾರೆ. ಇದು ಆರ್‌ಎಸ್‌ಎಸ್‌ನ ಸ್ವಯಂಸೇವಕರ ಗುಣ ಎಂದರು.
ಪ್ರೊ. ಪಿ.ವಿ. ಕೃಷ್ಣಭಟ್ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎದುರಿಸಿದ ಸವಾಲುಗಳನ್ನು ಮೆಲುಕು ಹಾಕಿದರು. ಎಬಿವಿಪಿ ಜೊತೆಗಿನ ಒಡನಾಟದ ಬಗ್ಗೆ ವಿವರಿಸಿ, ಪ್ರಸ್ತುತ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಹಲವು ಕಾರ್ಯಗಳನ್ನು ಆಯಾ ಕ್ಷೇತ್ರದ ತಜ್ಞರ ಜೊತೆ ಸೇರಿ ಮುಂದುವರೆಸುತ್ತಿರುವುದಾಗಿ ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ತಮ್ಮ ಬಳಿಯಿರುವ ₹ 12.5 ಲಕ್ಷಗಳನ್ನು ತಮ್ಮ ಮಾತಾಪಿತೃಗಳಾದ ‘ಗಂಗಮ್ಮ ವೆಂಕಟಸುಬ್ಬ ಭಟ್ಟ ಟ್ರಸ್ಟ್’ ಸ್ಥಾಪಿಸಿ ಅಲ್ಲಿ ಶಾಶ್ವತ ನಿಧಿಯಿಟ್ಟು, ಅದರಿಂದ ಬಂದ ಬಡ್ಡಿ ಹಣವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
ಶತಾವಧಾನಿ ಆರ್. ಗಣೇಶ್, ತಮ್ಮ ಹಾಗೂ ಪ್ರೊ. ಕೃಷ್ಣಭಟ್ ಅವರ ಸಂಪರ್ಕ ಐಜಿಎನ್‌ಸಿಎನಿಂದ ಸಾಧ್ಯವಾಯಿತು. ತಮ್ಮ ವಿದ್ವತ್‌ನಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರಿಗೆ ಸಹಸ್ರ ಚಂದ್ರದರ್ಶನ ಶಾಂತಿ ಮಾಡಿರುವುದು ಸಂತೋಷಕರ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಗದಗದ ಕರ್ನಾಟಕ ರಾಜ್ಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯುನಿವರ್ಸಿಟಿಯ ಉಪಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ, ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಆರ್‌ಎಸ್‌ಎಸ್‌ನ ವಿ. ನಾಗರಾಜ್ ಮೊದಲಾದವರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ಶ್ರೀರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ 12 ರಾಜ್ಯದ ಸಿಎಂಗಳು