Publish Date: Tue, 14 Oct 2025 (11:05 IST)
Updated Date: Tue, 14 Oct 2025 (11:09 IST)
ಬೆಂಗಳೂರು: ಕರ್ನಾಟಕ ಸರ್ಕಾರ ನಡೆಸಿರುವ ಜಾತಿಗಣತಿ ಸಮೀಕ್ಷೆಯಲ್ಲಿ ಕೆಲವರು ಪಾಲ್ಗೊಂಡಿಲ್ಲ. ಅಂತಹವರಿಗೆ ಇದೊಂದು ಕಡ್ಡಾಯ ನಿಯಮ ತರಲು ಸರ್ಕಾರ ಮುಂದಾಗಿದೆ.
ಜಾತಿಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ಕೆಲವರು ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲು ಇಷ್ಟವಿಲ್ಲ ಎಂದು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಾರೆ.
ಇದೀಗ ಸಮೀಕ್ಷೆಯಲ್ಲಿ ಪಾಲ್ಗೊಳ್ಳದವರಿಗೆ ದೃಢೀಕರಣ ಪತ್ರ ಕಡ್ಡಾಯಗೊಳಿಸಲು ಹಿಂದುಳಿದ ಆಯೋಗ ನಿರ್ಧರಿಸಿದೆ. ಜಾತಿಗಣತಿಯಿಂದ ದೂರ ಉಳಿಯುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೀಗಾಗಿ ಮಾಹಿತಿ ನಿರಾಕರಿಸಿದರೆ ಮುಚ್ಚಳಿಕೆ ಪತ್ರ ಬರೆಸಿ ಸಹಿ ಹಾಕುವುದು ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.
ಸಮೀಕ್ಷೆಯಲ್ಲಿ ಪಾಲ್ಗೊಳ್ಳದೇ ಇರುವುದರಿಂದ ಸಮೀಕ್ಷೆ ಅಪೂರ್ಣ ಎಂದು ಹೇಳುವ ಸಾಧ್ಯತೆಯಿದೆ. ಇದರಿಂದ ಮತ್ತೆ ಈ ಜಾತಿಗಣತಿಯೂ ವಿಫಲ ಎಂದು ಬಿಂಬಿಸುವ ಸಾಧ್ಯತೆಯಿದೆ. ಈ ಕಾರಣಕ್ಕೆ ಎಲ್ಲಾ ಕಡೆ ಸಮೀಕ್ಷೆಯಾಗಿದೆ ಎಂದು ದೃಢೀಕರಿಸಲು ಇಂತಹದ್ದೊಂದು ಮುಚ್ಚಳಿಕೆ ಬರೆದು ಸಹಿ ಹಾಕಿಸಲು ಚಿಂತನೆ ನಡೆಸಲಾಗಿದೆ.