Publish Date: Mon, 13 Oct 2025 (11:08 IST)
Updated Date: Mon, 13 Oct 2025 (11:11 IST)
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಸಚಿವ ಆರ್ ವಿ ದೇಶಪಾಂಡೆ ಟೀಕಿಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದರೆ ಐದು ಗ್ಯಾರಂಟಿ ಯೋಜನೆ ಜಾರಿಗೆ ತರುತ್ತಿರಲಿಲ್ಲ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ವೋಟ್ ಚೋರಿ ವಿರುದ್ಧ ಸಹಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆಯಾಗಿದೆ. ಇದರಿಂದ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದಿದ್ದಾರೆ.
ಒಂದು ಕಡೆ ಗ್ಯಾರಂಟಿ ಯೋಜನೆಯಿಂದ ಜನರಿಗೆ ಅನುಕೂಲವಾಗಿದ್ದರೆ ಇನ್ನೊಂದು ಕಡೆ ಸರ್ಕಾರ ನಡೆಸುವುದು ಕಷ್ಟವಾಗಿದೆ. ನಾನು ಸಿಎಂ ಆಗಿದ್ದಿದ್ದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿರಲಿಲ್ಲ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಮಾತ್ರ ಪ್ರಯೋಜನ ಪಡೆಯುತ್ತಿದ್ದಾರೆ. ಪುರುಷರಿಗೆ ಯಾವುದೇ ಪ್ರಯೋಜನವಿಲ್ಲ. ಗ್ಯಾರಂಟಿಗಳನ್ನು ನಿಭಾಯಿಸಲೇ ಹಲವು ಸಮಿತಿಗಳನ್ನು ಮಾಡಲಾಗಿದೆ ಎಂದಿದ್ದಾರೆ. ಇನ್ನು, ಸಿಎಂ ಇತ್ತೀಚೆಗೆ ಮರುನಾಮಕರಣ ಮಾಡಿರುವ ಇಂದಿರಾ ಕಿಟ್ ಬಗ್ಗೆಯೂ ಟೀಕಿಸಿದ್ದಾರೆ. ಸಿಎಂ ಇಂದಿರಾ ಕಿಟ್ ಕೊಡ್ತಿದ್ದಾರೋ ತೆಂಗಿನ ಕಾಯಿ ಕೊಡ್ತಾರೋ ನಮಗೇ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.