Publish Date: Thu, 16 Jan 2025 (16:23 IST)
Updated Date: Thu, 16 Jan 2025 (16:29 IST)
ನಂಜನಗೂಡು: ಚಾಮರಾಜಪೇಟೆಯಲ್ಲಿ ಪಶುಗಳ ಮೇಲೆ ಕ್ರೌರ್ಯ ಮೆರೆದ ಬೆನ್ನಲ್ಲೇ ಈಗ ನಂಜುಂಡೇಶ್ವರನ ಸನ್ನಿಧಾನದಲ್ಲೇ ಕರುಗಳ ಮೇಲೆ ಪೈಶಾಚಿಕ ಕೃತ್ಯ ನಡೆದ ಘಟನೆ ಬೆಳಕಿಗೆ ಬಂದಿದೆ.
ನಂಜನಗೂಡಿನಲ್ಲಿ ಹರಕೆಗಾಗಿ ಬಿಟ್ಟಿದ್ದ ಕರುಗಳ ಮೇಲೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಕರುಗಳ ಬಾಲ ಕತ್ತರಿಸಿ ಹಿಂಸೆ ನೀಡಿದ್ದಾರೆ. ಗಾಯಗೊಂಡ ಕರುಗಳನ್ನು ನೋಡಿದ ಸ್ಥಳೀಯರು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ.
ಆದರೆ ನಂಜುಂಡೇಶ್ವರ ಸನ್ನಿಧಾನದ ಜವಾಬ್ಧಾರಿಗೆ ಒಪ್ಪಿಸಿ ಹೋದ ಪಶುಗಳ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಗಮನ ಹರಿಸಿಲ್ಲ ಎಂಬ ಆಕ್ರೋಶವೂ ಕೇಳಿಬಂದಿದೆ. ಈ ಕುಕೃತ್ಯ ನಡೆಸಿದವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ.
ಹರಕೆಗಾಗಿ ಬಿಟ್ಟಿದ್ದ ಕರು ಪರಶುರಾಮ ದೇಗುಲ ರಸ್ತೆಯಲ್ಲಿದ್ದಾಗ ಬೆಳಗ್ಗಿನ ಜಾವ ಯಾರೋ ಮಾರಕಾಸ್ತ್ರಗಳಿಂದ ಬಾಲ ತುಂಡರಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಕರುಗಳ ಮೇಲೆ ದಾಳಿಯಾಗಿದ್ದು ಇದೆ ಎಂದು ತಿಳಿದುಬಂದಿದೆ. ಈ ಘಟನೆ ನಡೆದ ಬಳಿಕ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಹರಕೆಗಾಗಿ ಬಿಡುವ ಕರುಗಳನ್ನು ಸಾಕಲು ಗೋಶಾಲೆ ಅಗತ್ಯವೆಂದು ಒತ್ತಾಯಿಸಿದ್ದಾರೆ.