ಬೆಂಗಳೂರು: ವಸತಿ ಇಲಾಖೆ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಸಚಿವ ಜಮೀರ್ ಅಹ್ಮದ್ ಅವರ ಬಳಿ ರಾಜೀನಾಮೆ ಕೊಡಿಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಾಲು ಸಾಲು ಭ್ರಷ್ಟಾಚಾರಗಳು ನಡೆಯುತ್ತಿವೆ ಎನ್ನುವುದಕ್ಕೆ ಸ್ವತಃ ಕಾಂಗ್ರೆಸ್ ಪಕ್ಷದಲ್ಲಿರುವ ಮಂತ್ರಿಗಳು ಮತ್ತು ಶಾಸಕರೇ ಬೇಸತ್ತು ಪತ್ರ-ಆಡಿಯೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದರು.
ಉದಾಹರಣೆಗೆ ಬಿ.ಆರ್.ಪಾಟೀಲ್ ಅವರು, ಮನೆಗಳನ್ನು ಹಂಚಿಕೆ ಮಾಡುತ್ತಿಲ್ಲ, ಮನೆಗಳನ್ನು ಮಂಜೂರು ಮಾಡುತ್ತಿಲ್ಲ. ನಾನು ಬರೆದ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷನೇ ತೆಗೆದುಕೊಂಡು ಹಣ ತೆಗೆದುಕೊಂಡು ಹೋದರೆ ಮಾತ್ರ ಮನೆಗಳು ಮಂಜೂರು ಆಗುತ್ತಿದೆ. ಈ ಸರ್ಕಾರದಲ್ಲಿ ನನ್ನ ಪತ್ರಕ್ಕೆ ಯಾವುದೇ ಕಿಮ್ಮತ್ತಿಲ್ಲ ಎಂದು ಬಹಳ ಬೇಸರದಿಂದ ಹೇಳಿದ್ದಾರೆ. ಇದನ್ನು ಬಿ.ಆರ್. ಪಾಟೀಲ್ ಅವರು ಎರಡೆರಡು ಬಾರಿ ಹೇಳಿದ್ದಾರೆ ಎಂದು ತಿಳಿಸಿದರು.
ಸಚಿವ ಜಮೀರ್ ಅವರÀ ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಕಾಂಗ್ರೆಸ್ ಪಕ್ಷದ ಒಬ್ಬ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರು ಬೇಸರದಿಂದ ಹೇಳಿಕೆ ನೀಡುತ್ತಿದ್ದಾರೆ. 950 ಮನೆಗಳು ನಮ್ಮ ಆಳಂದ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ನಾನು ಪತ್ರವನ್ನು ಬರೆದಾಗ ಮನೆಗಳನ್ನು ಕೊಟ್ಟಿಲ್ಲ. ನನ್ನದೇ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ತೆಗೆದುಕೊಂಡು ಹೋಗಿ ವಸತಿ ಇಲಾಖೆಗೆ ನೀಡಿದ್ದು, ನಂತರ ದುಡ್ಡು ಪಡೆದು ಮನೆಗಳನ್ನು ಮಂಜೂರು ಮಾಡಿದ್ದಾರೆ ಎಂದು ಹೇಳಿದ್ದಾರೆ. ಎಲ್ಲಿದೆ ಸಾಕ್ಷಿ ಎಂದು ಸಿದ್ದರಾಮಯ್ಯನವರು ಕೇಳುತ್ತಿದ್ದರು. ಇದಕ್ಕಿಂತ ಸಾಕ್ಷಿ ಬೇಕೆ ಮಾನ್ಯ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಬಾಯಿಬಿಟ್ಟರೆ ಮತ್ತು ಮುಕ್ತವಾಗಿ ಮಾತನಾಡಿದರೆ ಸರ್ಕಾರವೇ ಅಲ್ಲಾಡಿಹೋಗುತ್ತದೆ ಮತ್ತು ಸರ್ಕಾರಕ್ಕೆ ಕಂಟಕ ಬರುತ್ತದೆ ಎಂದು ಬಿ.ಆರ್.ಪಾಟೀಲ್ ರವರು ಹೇಳಿದ್ದಾರೆ. ಅವರೇನೂ ಬಿಜೆಪಿ ಮತ್ತು ಜೆಡಿಎಸ್ ಶಾಸಕರಲ್ಲ ಎಂದು ಗಮನ ಸೆಳೆದರು.
ಮಂತ್ರಿಗಳು- ಅಧಿಕಾರಿಗಳು ಹಾಗೇ ಇದ್ದಾರೆ..
ಸಚಿವ ಕೃಷ್ಣಬೈರೇಗೌಡರು ತಾಲ್ಲೂಕು ಕಚೇರಿಗೆ ಹೋದಾಗ, ಒಂದೂವರೆ ವರ್ಷದಿಂದ ಪತ್ರವನ್ನು ಇಟ್ಟುಕೊಂಡು ದಾಖಲಾತಿಗಾಗಿ ಓಡಾಟ ಕಂಡುಬಂದಿದೆ. ಅಧಿಕಾರಿಗಳು ಕೆಲಸ ಮಾಡಿ ಕೊಡುತ್ತಿಲ್ಲ; ಏನು ಎಂದು ಮುಕ್ತವಾಗಿ ತಿಳಿಸಿ; ಬೋರ್ಡ್ ಹಾಕಿಬಿಡಿ, ಪಾರದರ್ಶಕವಾಗಿ ರೇಟ್ ನಿಗದಿಪಡಿಸಿ ಎಂದು ಕೃಷ್ಣಬೈರೇಗೌಡರು ಅಧಿಕಾರಿಗಳಿಗೆ ಹೇಳಿದ್ದಾರೆ. ಇದು ಅಧಿಕಾರಿಗಳು ಸಚಿವರ ಮಾತು ಕೇಳುತ್ತಿಲ್ಲ ಎಂಬುದಕ್ಕೆ ಉದಾಹರಣೆ ಎಂದು ಆಕ್ಷೇಪಿಸಿದರು. ಮಂತ್ರಿಗಳೂ ಹಾಗೇ ಇದ್ದಾರೆ; ಅಧಿಕಾರಿಗಳೂ ಹಾಗೇ ಇದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಗಣಿ ಇಲಾಖೆಯಲ್ಲಿ 35 ಸಾವಿರ ಕೋಟಿ ರೂ. ಅಕ್ರಮ ಅದಿರು ಲೂಟಿಯಾಗಿದೆ. 12,228 ಕೋಟಿ ರೂ. ಸರಕಾರಕ್ಕೆ ನಷ್ಟವಾಗಿದೆ. ಇದರಲ್ಲಿ ಎಸ್.ಐ.ಟಿ. ತನಿಖೆಗಾಗಿ ಪತ್ರ ಬರೆದರೂ ಯಾವುದೇ ಕಿಮ್ಮತ್ತಿಲ್ಲ; ಎಸ್.ಐ.ಟಿ.ಯಲ್ಲಿ ಯಾವುದೇ ಕಾರ್ಯದ ಪ್ರಗತಿ ಇಲ್ಲ. ಕೇವಲ ಶೇ 2.6ರಷ್ಟು ಮಾತ್ರ ತನಿಖೆ ಆಗಿದೆ ಎಂದು ತಿಳಿಸಿದ್ದಾಗಿ ವಿವರ ನೀಡಿದರು.
ಅವರು ಮುಂದುವರೆದು ಪುಣ್ಯದ ಮೇಲೆ ಪಾಪದ ವಿಜಯ ಎಂದಿದ್ದಾರೆ. ಮಾನ್ಯ ಸಿದ್ದರಾಮಯ್ಯನವರೇ, ಬೆಂಗಳೂರಿನಿಂದ ಬಳ್ಳಾರಿವರೆಗೆ ನೀವು ಗಣಿ ಅಕ್ರಮದ ವಿರುದ್ಧ ಪಾದಯಾತ್ರೆ ಮಾಡಿದ್ದೀರಲ್ಲವೇ? ಏನು ಮಾಡುತ್ತಿದೆ ನಿಮ್ಮ ಸರಕಾರ ಎಂದು ಪ್ರಶ್ನಿಸಿದರು. ಅಕ್ರಮಗಳಲ್ಲಿ ಕೇವಲ 2.6ರಷ್ಟು ಮಾತ್ರ ತನಿಖೆ ಆಗಿದೆ ಎಂದು ಹಿರಿಯ ಸಚಿವ ಎಚ್.ಕೆ.ಪಾಟೀಲರು ಹೇಳುತ್ತಿದ್ದಾರೆ ಎಂದು ಗಮನ ಸೆಳೆದರು. 97.4 ಶೇಕಡಾದಷ್ಟು ತನಿಖೆಯೇ ಆಗುತ್ತಿಲ್ಲ. ತನಿಖೆ ಆದರೆ ಅಧಿಕಾರಿಗಳು ಒಳಗೆ ಹೋಗುವ ಭಯವೇ? ಯಾರಾದರೂ ಸಚಿವರು ರಾಜೀನಾಮೆ ಕೊಡಬೇಕಾದೀತೆಂಬ ಭಯವೇ? ಯಾಕೆ ತನಿಖೆ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿದರು.
ಲೋಕಾಯುಕ್ತ ಅಧಿಕಾರಿ ಭ್ರಷ್ಟಾಚಾರ
ಸಿದ್ದರಾಮಯ್ಯನವರು ಬೊಮ್ಮಾಯಿಯವರ ಸರಕಾರದ ಬಗ್ಗೆ ಪೇ ಸಿಎಂ ಎನ್ನುತ್ತಿದ್ದರು. ನಿಮ್ಮ ಸರಕಾರದಲ್ಲಿ ಏನು ನಡೆಯುತ್ತಿದೆ? ಲೋಕಾಯುಕ್ತದಲ್ಲಿ ಏನು ನಡೆಯುತ್ತಿದೆ? ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ, ಕಾನ್ಸ್ಟೆಬಲ್ ಆಗಿ ಕೆಲಸ ಮಾಡಿದ್ದ ನಿಂಗಪ್ಪ, ಇವರು ಒಟ್ಟಾಗಿ ರಾಜ್ಯದಲ್ಲಿ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳನ್ನು ನಿಮ್ಮ ಮನೆ ಮೇಲೆ ದಾಳಿ ಮಾಡುವುದಾಗಿ ಹೆದರಿಸಿ, ಕೋಟಿಗಟ್ಟಲೆ ಹಣವನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಲೋಕಾಯುಕ್ತ ಇಲಾಖೆ ಏನು ಮಾಡುತ್ತಿದೆ ಎಂದು ಕೇಳಿದರು.
ಎಷ್ಟು ಪ್ರಮಾಣದಲ್ಲಿ ಈ ಸರಕಾರ ಮುಳುಗಿ ಹೋಗಿದೆ ಎಂದರೆ, ಸ್ವತಃ ಮುಖ್ಯಮಂತ್ರಿಗಳೇ 14 ನಿವೇಶನಗಳನ್ನು ವಾಪಸ್ ಮಾಡಿದ್ದಾರೆ. ನಿಮ್ಮ ಪ್ರಿಯಾಂಕ್ ಖರ್ಗೆ, 5 ಎಕರೆ ಜಮೀನನ್ನು ವಾಪಸ್ ಕೊಟ್ಟಿದ್ದಾರೆ. ನಿಮ್ಮ ಸರಕಾರದಲ್ಲಿ ಭ್ರಷ್ಟಾಚಾರ ಬಯಲಿಗೆ ಬಂದರೆ ಅದನ್ನು ವಾಪಸ್ ಕೊಡುವುದು, ಅದೇರೀತಿ ನೀವು ಪ್ರಾಮಾಣಿಕರಾಗುವುದೇ ಎಂದು ಕೇಳಿದರು.
ಪರಶುರಾಂ ಎಂಬವರು ಯಾದಗಿರಿಯಲ್ಲಿ ವರ್ಗಾವಣೆ ದಂಧೆ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿದ್ದರು. ಚನ್ನಾರೆಡ್ಡಿ ಎಂಬವರು ಹಣ ಪಡೆದು ವರ್ಗಾವಣೆ ಮಾಡಿಲ್ಲ ಎಂದು ಅವರು ಆರೋಪಿಸಿದ್ದರು. ಹೀಗೆ ಸಾಲುಸಾಲು ಭ್ರಷ್ಟಾಚಾರದ ಪ್ರಕರಣಗಳು ನಡೆಯುತ್ತಿವೆ. ವಸತಿ ಇಲಾಖೆಯಲ್ಲಿ ಬಿ.ಆರ್.ಪಾಟೀಲ್ ಬೇಜಾರಾದರು; ಎಚ್.ಕೆ.ಪಾಟೀಲರು ಬೇಸರ ಸೂಚಿಸಿದ್ದಾರೆ. ಕೃಷ್ಣಬೈರೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಜಿಲ್ಲೆಯ ರಾಯರೆಡ್ಡಿಯವರು ಕರ್ನಾಟಕವು ನಂಬರ್ 1 ಭ್ರಷ್ಟ ರಾಜ್ಯ ಎಂದಿದ್ದಾರೆ. ನಿಮ್ಮ ಸರಕಾರದ ಬಗ್ಗೆಯೇ ಹೇಳಿದ್ದಾರೆ ಎಂದು ಗಮನ ಸೆಳೆದರು.
ಸಿದ್ದರಾಮಯ್ಯನವರು ನಿದ್ರೆಯಲ್ಲಿದ್ದಾರಾ? ಡಿ.ಕೆ.ಶಿವಕುಮಾರ್ ಅವರು ನಿದ್ರೆಯಲ್ಲಿದ್ದಾರಾ? ಯಾಕೆ ಸುಮ್ಮನೆ ಇದ್ದೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಮಾತಾಡಿ, ಕ್ರಮ ತೆಗೆದುಕೊಳ್ಳಿ; ಅಥವಾ ನಿಮಗೇನಾದರೂ ಭಾಗಶಃ ಮೊತ್ತ ಬರುತ್ತಿದೆಯೇ ಎಂದರು.
ಬಿ.ಆರ್.ಪಾಟೀಲರು ಹೇಳಿದ್ದು ಸತ್ಯ ಇದೆ ಎಂದು ನಾಗಠಾಣದ ಶಾಸಕರ ಪಿ.ಎ. ವಿಠ್ಠಲ್ ಎಂಬುವರು ಹೇಳಿದ್ದಾರೆ. ನಮ್ಮ ಕ್ಷೇತ್ರದಲ್ಲೂ ದುಡ್ಡು ಕೊಟ್ಟ ಮೇಲೆ ಮನೆಗಳು ಮಂಜೂರಾಗಿವೆ ಎಂದಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ಎಂಬುದು ಮನೆಮಾತಾಗಿದೆ; ತಾಂಡವವಾಡುತ್ತಿದೆ. ಆದರೆ, ಸಿದ್ದರಾಮಯ್ಯನವರು ಏನೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯನವರ ಈ ಸರಕಾರಕ್ಕೆ ನಾಚಿಕೆ ಇಲ್ಲ ಎಂದು ಆಕ್ಷೇಪಿಸಿದ ಅವರು, ನಿಮಗೆ ಶಕ್ತಿ ಸಾಮಥ್ರ್ಯ ಇದ್ದರೆ ಜಮೀರ್ ಬಗ್ಗೆ ಕ್ರಮ ತೆಗೆದುಕೊಳ್ಳುವಿರಾ ಎಂದು ಪ್ರಶ್ನಿಸಿದರು. ಲೋಕಾಯುಕ್ತ, ಅಬಕಾರಿ ಇಲಾಖೆ ವಿಷಯದಲ್ಲಿ ಕ್ರಮ ತೆಗೆದುಕೊಳ್ತೀರಾ ಎಂದು ಕೇಳಿದರು. ಎಚ್.ಕೆ.ಪಾಟೀಲ್ ಅವರು ಹೇಳಿದ ವಿಚಾರಗಳ ಬಗ್ಗೆ, ಕರ್ನಾಟಕ ಸರಕಾರಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗುತ್ತಿದೆ. 35 ಸಾವಿರ ಕೋಟಿ ರೂಗಳಷ್ಟು ಅಕ್ರಮಗಳಾಗಿವೆ. ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹವನ್ನು ಮುಂದಿಟ್ಟರು.
ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದುಹೋಗಿದೆ. ಎಚ್.ಕೆ.ಪಾಟೀಲ್ ಅವರು ಕರ್ನಾಟಕದಲ್ಲಿ ಪುಣ್ಯದ ಮೇಲೆ ಪಾಪದ ವಿಜಯ ಎಂದಿದ್ದು ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು. ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಸಾವುಗಳು ಸಂಭವಿಸಿದರೂ ತಪ್ಪು ಮಾಡದೆ ಇರುವವರ ಮೇಲೆ ಈ ಸರಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಮಂತ್ರಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಆಗ್ರಹಿಸಿದರು. ನಿಮ್ಮ ಕೈಯಲ್ಲಿ ಏನೂ ಆಗುತ್ತಿಲ್ಲ ಎಂದು ಜನರಿಗೂ ಗೊತ್ತಾಗುತ್ತಿದೆ ಎಂದು ತಿಳಿಸಿದರು.