Select Your Language

Notifications

webdunia
webdunia
webdunia
webdunia

ಬೆಂಗಳೂರಿಗೆ ಬಂದ ಅಮಿತ್ ಶಾ ಏನು ಹೇಳಿದ್ರು: ಗುಟ್ಟು ಬಿಟ್ಟು ಕೊಟ್ಟ ಬಿವೈ ವಿಜಯೇಂದ್ರ

BY Vijayendra-Amit Shah

Krishnaveni K

ಬೆಂಗಳೂರು , ಶುಕ್ರವಾರ, 20 ಜೂನ್ 2025 (13:56 IST)
Photo Credit: X
ಬೆಂಗಳೂರು: ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ನಮ್ಮ ಹೋರಾಟವನ್ನು ದ್ವಿಗುಣಗೊಳಿಸಬೇಕೆಂಬ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಮತ್ತು ಪಕ್ಷದ ರಾಷ್ಟ್ರೀಯ ಮುಖಂಡ ಅಮಿತ್ ಶಾ ಜೀ ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಮುಂಜಾನೆ ನಾನು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ್, ಅರವಿಂದ ಬೆಲ್ಲದ್ ಅವರ ಜೊತೆಗೂಡಿ ಮಾನ್ಯ ಅಮಿತ್ ಶಾ ಜೀ ಅವರನ್ನು ಭೇಟಿ ಮಾಡಿದ್ದೇವೆ. ರಾಜ್ಯ ರಾಜಕಾರಣ, ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚಿಸಿದ್ದೇವೆ ಎಂದು ವಿವರಿಸಿದರು.

ಅಲ್ಪಸಂಖ್ಯಾತರ ಓಲೈಕೆ ನಿಟ್ಟಿನಲ್ಲಿ ರಾಜ್ಯ ಸರಕಾರ ತೀರ್ಮಾನ ತೆಗೆದುಕೊಳ್ಳುತ್ತಿದೆ. ನಿನ್ನೆ ವಸತಿ ಇಲಾಖೆಯಡಿ ಅಲ್ಪಸಂಖ್ಯಾತರಿಗೆ ಶೇ 10 ಇದ್ದ ಮೀಸಲಾತಿಯನ್ನು ಶೇ 15ಕ್ಕೆ ಏರಿಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್’ ಆಧಾರದ ಮೇಲೆ ದೇಶದ ಹಿಂದೂಗಳು, ಅಲ್ಪಸಂಖ್ಯಾತರು ಸೇರಿ ಎಲ್ಲರಿಗೂ ನ್ಯಾಯ ಕೊಡುತ್ತಿದ್ದಾರೆ. ಮೋದಿಜೀ ಅವರು ಕೊಟ್ಟ ಕಿಸಾನ್ ಸಮ್ಮಾನ್ ಯೋಜನೆಯು ರೈತರಿಗೆ 6 ಸಾವಿರ ಜಮಾ ಆಗುತ್ತಿದ್ದು, ಇದು ಕೇವಲ ಹಿಂದೂಗಳಿಗೆ ಮಾತ್ರ ಅಲ್ಲ ಎಂದು ಗಮನ ಸೆಳೆದರು. ರೈತಾಪಿ ವರ್ಗದ ಎಲ್ಲ ಸಮುದಾಯ, ಧರ್ಮದವರಿಗೆ ಅದು ಜಮಾ ಆಗುತ್ತಿದೆ ಎಂದು ವಿವರಿಸಿದರು.
 
ಮೋದಿಜೀ ಅವರ ಬೇಟಿ ಬಚಾವೊ, ಬೇಟಿ ಪಡಾವೊ ಕಾರ್ಯಕ್ರಮವು ಕೇವಲ ಹಿಂದೂ ಹೆಣ್ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಖಂಡಿತವಾಗಿ ಭಗವಂತ ಒಳ್ಳೆಯದು ಮಾಡಲು ಸಾಧ್ಯವಿಲ್ಲ; ಬಿಜೆಪಿ ಹೋರಾಟ ಒಂದು ಕಡೆ ಇದ್ದರೆ, ಮುಖ್ಯಮಂತ್ರಿಗಳ ನಡವಳಿಕೆ ಅವರ ಸ್ಥಾನಕ್ಕೆ ಅಪಮಾನ ಮಾಡುವಂತಿದೆ ಎಂದು ಆಕ್ಷೇಪಿಸಿದರು.
 
ಜನರಿಂದ ಸರಕಾರಕ್ಕೆ ತಕ್ಕ ಉತ್ತರ
ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಬರುವ ದಿನಗಳಲ್ಲಿ ರಾಜ್ಯದ ಜನರೇ ಅವರಿಗೆ ಉತ್ತರ ನೀಡುತ್ತಾರೆ ಎಂದು ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಜೊತೆ ಸಮನ್ವಯಕ್ಕಾಗಿ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕರ ಜೊತೆ ಅಧಿವೇಶನಕ್ಕೆ ಮೊದಲು ಚರ್ಚೆ ಮಾಡುವುದಾಗಿ ಅವರು ಪ್ರಶ್ನೆಗೆ ಉತ್ತರ ನೀಡಿದರು.
 
ಲಂಚ ಇಲ್ಲದೇ ಕೆಲಸಗಳು ಆಗುತ್ತಿಲ್ಲ..

ವಸತಿ ಹಂಚಿಕೆಗೆ ಹಣ ಕೊಡಬೇಕೆಂಬ ಕಾಂಗ್ರೆಸ್ಸಿನ ಬಿ.ಆರ್.ಪಾಟೀಲ್ ಅವರ ಆರೋಪ ಕುರಿತ ಧ್ವನಿಸುರುಳಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಹೈಕಮಾಂಡಿನ ಎಟಿಎಂ ಆಗಿ ಸರಕಾರವನ್ನು ಪರಿವರ್ತನೆಗೊಳಿಸಿದೆ. ಹಿಂದೆ ಬಿಜೆಪಿಯ ಸರಕಾರದ ವಿರುದ್ಧ ಶೇ 40 ರ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರು. ಇವತ್ತು ಜನಸಾಮಾನ್ಯರು, ಉದ್ಯಮಿಗಳು ಸೇರಿ ಯಾರನ್ನೇ ಕೇಳಿದರೂ ಶೇ 100 ಭ್ರಷ್ಟಾಚಾರ ನಡೆಯುವ ಬಗ್ಗೆ ಜನಸಾಮಾನ್ಯರೇ ಮಾತನಾಡುತ್ತಿದ್ದಾರೆ. ಈ ರೀತಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋದ ಬಗ್ಗೆ ಸ್ವತಃ ಆಡಳಿತ ಪಕ್ಷದ ಶಾಸಕರೇ ಬಹಿರಂಗ ಪಡಿಸಿದ್ದಾರೆ. ಯಾವುದೇ ಇಲಾಖೆಗೆ ಹೋದರೂ ಲಂಚ ಇಲ್ಲದೇ ಕೆಲಸಗಳು ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಮುಖ್ಯಮಂತ್ರಿಗಳು ಸೇರಿ ಎಲ್ಲರೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಬಿ.ಆರ್.ಪಾಟೀಲರ ಆಡಿಯೋ ಇವುಗಳಿಗೆ ಚಿಕ್ಕ ನಿದರ್ಶನ ಎಂದು ತಿಳಿಸಿದರು. ಈ ವಿಷಯದಲ್ಲಿ ಜನರು ಸರಕಾರದ ಬಗ್ಗೆ ಬೇಸತ್ತಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‍ನವರು ಕಿರುಕುಳ ಕುರಿತ ಪ್ರಶ್ನೆಗೆ ಉತ್ತರ ನೀಡಿ, ಕಾನೂನು ತರುವುದಾಗಿ ಹೇಳಿದ್ದರು. ಇಂಥ ಘಟನೆ ಆದಾಗ ದೊಡ್ಡ ಭಾಷಣ ಬಿಗಿದಿದ್ದರು. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಹೀಗಾದರೆ, ರಾಜ್ಯದಲ್ಲಿ ಏನಾಗಿದೆ ಪರಿಸ್ಥಿತಿ ಎಂದು ಕೇಳಿದರು. ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಳ ಕುರಿತು ಸದನದಲ್ಲೂ ಚರ್ಚೆ ಆಗಿದೆ. ಕಾನೂನು ತರುವುದಾಗಿ ಹೇಳಿದ್ದರು. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದರು.

ಆರ್‍ಸಿಬಿ ವಿಜಯೋತ್ಸವ- ಕಾಲ್ತುಳಿತ ಹಾಗೂ 11 ಸಾವಿನ ನಂತರ ಹೊಸ ಕಾನೂನು ತರುವುದಾಗಿ ಕಥೆ ಹೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು. ರಾಜ್ಯ ಸರಕಾರ ತನ್ನ ಆದ್ಯತೆಯನ್ನು ಮರೆತು, ಅಭಿವೃದ್ಧಿಯೂ ಇಲ್ಲದೆ, ಭ್ರಷ್ಟಾಚಾರದಲ್ಲಿ ಮುಳುಗಿ ಹೋದ ಪರಿಣಾಮವಾಗಿ ರಾಜ್ಯದ ಜನರು ಸಮಸ್ಯೆ ಅನುಭವಿಸಬೇಕಾಗಿದೆ ಎಂದರು. ಪಕ್ಷದೊಳಗಿನ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದೇವೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
 
 
 

Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಇಂದಿನ ಅಡಿಕೆ, ಕಾಳುಮೆಣಸು ಮಾರುಕಟ್ಟೆ ದರ ಹೇಗಿದೆ ನೋಡಿ