ಬೆಂಗಳೂರು: ತುರ್ತು ಪರಿಸ್ಥಿತಿ ವಿರುದ್ಧ ಜನಜಾಗೃತಿ ಅಭಿಯಾನದ ಸಭೆಯನ್ನು ಇದೇ 24ರಂದು ಸಂಜೆ 4.30ಕ್ಕೆ ಬೆಂಗಳೂರಿನ ಟೌನ್ ಹಾಲ್ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಉದ್ಘಾಟಿಸುವರು ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಮತ್ತು ಮೀಸಾ ಬಂಧಿ ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸುವರು. ಇಂಡಿಯನ್ ಎಕ್ಸ್ಪ್ರೆಸ್ನ ಪ್ರಮುಖ ಅಂಕಣಕಾರರಾಗಿದ್ದ, ಹಾಗೂ ತುಘಲಕ್ ಪತ್ರಿಕೆಯ ಸಂಪಾದಕರಾಗಿ ತುರ್ತು ಪರಿಸ್ಥಿತಿ ವಿರುದ್ಧ ಜನಜಾಗೃತಿ ಮೂಡಿಸಿದ್ದ ತಮಿಳುನಾಡಿನ ಎಸ್.ಗುರುಮೂರ್ತಿ ಅವರು ಪ್ರಧಾನ ಭಾಷಣ ಮಾಡುವರು ಎಂದು ತಿಳಿಸಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿಯಾಗಿದ್ದವರನ್ನು ಗುರುತಿಸಿ ಅಭಿನಂದಿಸಿ ಅವರ ಅನುಭವ ದಾಖಲಿಸಲಾಗುವುದು. ಯುವ ಪೀಳಿಗೆ ಮತ್ತು ಮೀಸಾ ಬಂಧಿಗಳ ಜೊತೆ ಸಂವಾದ ಏರ್ಪಡಿಸುವುದು, ತುರ್ತು ಪರಿಸ್ಥಿತಿ ವಿರುದ್ಧ ಜಾಗೃತ ನಡಿಗೆ ನಡೆಯಲಿದೆ. ಮೀಸಾ ಬಂಧಿಗಳು ತಾವು ಇದ್ದ ಜೈಲಿಗೆ ಭೇಟಿ ಕೊಡಲಿದ್ದಾರೆ. ಸಾಂವಿಧಾನಿಕ ಮೌಲ್ಯಗಳ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ತುರ್ತು ಪರಿಸ್ಥಿತಿಯನ್ನು ಭವಿಷ್ಯದಲ್ಲಿ ಹೇರಬಾರದು; ಕಾಂಗ್ರೆಸ್ ಹೇಗೆ ಸರ್ವಾಧಿಕಾರಿ- ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂಬುದನ್ನು ತಿಳಿಸಿ ಜನಜಾಗೃತಿ ಮೂಡಿಸಲು ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಬಿಜೆಪಿ ಮತ್ತು ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್, ವಕೀಲರ ಸಂಘಟನೆ, ಸಾಮಾಜಿಕ ಗಣ್ಯರ ಸಂಘಟನೆ ಜೊತೆ ಇದನ್ನು ಆಯೋಜಿಸಲಾಗುತ್ತಿದೆ ಎಂದರು.
22ರಿಂದ 30ರವರೆಗೆ ಜನಜಾಗೃತಿ ಅಭಿಯಾನ
ಜೂನ್ 22ರಿಂದ 30ರವರೆಗೆ ಜನಜಾಗೃತಿ ಅಭಿಯಾನವು ವಿವಿಧ ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ಸಿ.ಟಿ.ರವಿ ಅವರು ಪ್ರಕಟಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಹರದೀಪ್ ಸಿಂಗ್ ಪುರಿ ಅವರು, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂಗಳಾದ ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಪಕ್ಷದ ಉಸ್ತುವಾರಿಗಳಾದ ರಾಧಾಮೋಹನ್ ದಾಸ್ ಅಗ್ರವಾಲ್, ರಾಷ್ಟ್ರೀಯ ವಕ್ತಾರ ಗುರುಪ್ರಕಾಶ್ ಪಾಸ್ವಾನ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಎಲ್ಲ ಜಿಲ್ಲೆಗಳಿಗೆ ತೆರಳುತ್ತಾರೆ. ತುರ್ತು ಪರಿಸ್ಥಿತಿ ವಿರುದ್ಧ ಜಾಗೃತಿ ಮೂಡಿಸಲಿದ್ದಾರೆ ಎಂದು ವಿವರ ನೀಡಿದರು.
ಇದೇ ಜೂನ್ 25ನೇ ತಾರೀಕಿಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ 50 ವರ್ಷಗಳಾಗಲಿದೆ. ಶ್ರೀಮತಿ ಇಂದಿರಾ ಗಾಂಧಿಯವರ ಕಾಲಘಟ್ಟದಲ್ಲಿ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿದ್ದು, ಸಂವಿಧಾನವನ್ನೇ ಐ.ಸಿ.ಯು ವಿನಲ್ಲಿ ಇಡಲಾಗಿತ್ತು. ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿತ್ತು. ಮಾನವ ಹಕ್ಕುಗಳ ನಿರಂತರ ದಮನ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಸ್ವಾತಂತ್ರ್ಯ ಹರಣ ಆಗಿತ್ತು ಎಂದು ವಿವರಿಸಿದರು. ಬಂಧನವನ್ನು ಪ್ರಶ್ನಿಸುವುದು ದೂರದ ಮಾತಾಗಿತ್ತು. ಕೊಂದರೂ ಪ್ರಶ್ನಿಸುವಂತಿಲ್ಲ ಎಂದು ಅಟಾರ್ನಿ ಜನರಲ್ ಹೇಳಿದ್ದರು ಎಂದು ತಿಳಿಸಿದರು.
ಸಂವಿಧಾನಕ್ಕೆ ಮನಸೋ ಇಚ್ಛೆ ತಿದ್ದುಪಡಿ..
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮನಸೋ ಇಚ್ಛೆ ಹಾಗೂ ಯಾವುದೇ ಚರ್ಚೆ ಇಲ್ಲದೆ ಸಂವಿಧಾನಕ್ಕೆ ತಿದ್ದುಪಡಿ ಆಗಿತ್ತು ಎಂದು ಸಿ.ಟಿ.ರವಿ ಅವರು ತಿಳಿಸಿದರು.
ಪೀಠಿಕೆಯ ತಿದ್ದುಪಡಿ ಆಗಿತ್ತು. 21 ತಿಂಗಳ ಕಾಲ ಅತ್ಯಂತ ಕರಾಳವಾಗಿ ಮಾನವ ಹಕ್ಕುಗಳ ದಮನ ಮಾಡಲಾಯಿತು. ಇಂದಿರಾ ಗಾಂಧಿಯವರ ಆಯ್ಕೆಯನ್ನು ಅಲಹಾಬಾದ್ ಹೈಕೋರ್ಟ್ ಅಸಿಂಧುಗೊಳಿಸಿತ್ತು. ಆ ತೀರ್ಪನ್ನು ರದ್ದು ಮಾಡಲು ಬೇಕಾದ ತಿದ್ದುಪಡಿ ಮಾಡಿ ಸರ್ವಾಧಿಕಾರ ಹೇರಿದ್ದರು. ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಸ್ವಾರ್ಥಕ್ಕಾಗಿ, ಅಕ್ರಮಗಳನ್ನು ಮುಚ್ಚಿ ಹಾಕಲು, ಕುರ್ಚಿ ಉಳಿಸಿಕೊಳ್ಳಲು ಸಂವಿಧಾನದ ಮೇಲೆ ನಡೆಸಿದ ದೌರ್ಜನ್ಯ ಇದಾಗಿತ್ತು ಎಂದು ಆಕ್ಷೇಪಿಸಿದರು.
ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾತ್ರವಲ್ಲದೆ, ಪ್ರಜಾಪ್ರಭುತ್ವದ ಪರವಾಗಿ ಧ್ವನಿ ಎತ್ತಿದ ಎಲ್ಲ ವಿಪಕ್ಷ ನಾಯಕರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಎಂದರೆ ಅದು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ವಿಶ್ಲೇಷಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಈ ಚಳವಳಿ ನಡೆಯಿತು. ಅಟಲ್ಜೀ, ಅಡ್ವಾಣಿ, ಜಾರ್ಜ್ ಫರ್ನಾಂಡಿಸ್ ಮೊದಲಾದವರು, ರಾಜ್ಯದಲ್ಲಿ ದೇವೇಗೌಡರು, ಯಡಿಯೂರಪ್ಪನವರು, ಪಿ.ಜಿ.ಆರ್.ಸಿಂಧ್ಯಾ, ದತ್ತಾತ್ರೇಯ ಹೊಸಬಾಳೆಯವರು ಸೇರಿ ದೇಶದಲ್ಲಿ ಲಕ್ಷಾಂತರ ಜನರು ನಿರಂತರವಾಗಿ ಹೋರಾಟ ನಡೆಸಿದ್ದರು ಎಂದು ವಿವರ ನೀಡಿದರು.
ಕರ್ನಾಟಕದಲ್ಲೂ ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿ
ತುರ್ತು ಪರಿಸ್ಥಿತಿಯ 50 ವರ್ಷಗಳ ಬಳಿಕವೂ ಕಾಂಗ್ರೆಸ್ಸಿನಲ್ಲಿ ಆಂತರಿಕವಾಗಿ ಪ್ರಜಾಪ್ರಭುತ್ವ ಉಳಿದಿಲ್ಲ. ಕರ್ನಾಟಕದಲ್ಲೂ ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಈ ಸರಕಾರವನ್ನು ಟೀಕಿಸಿದವರ ಮೇಲೂ ಮೊಕದ್ದಮೆ ದಾಖಲಾಗುತ್ತಿದೆ ಎಂದು ದೂರಿದರು.
ಇಂದಿರಾ ಬ್ರಿಗೇಡ್, ಸಂಜಯ್ ಬ್ರಿಗೇಡಿನಲ್ಲಿ ಕೆಲಸ ಮಾಡುತ್ತಿದ್ದ ಆಗಿನ ಯಂಗ್ ಟರ್ಕ್ಗಳಾದ ಮತ್ತು ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗ ಹೊಗಳು ಭಟರಾಗಿದ್ದರು. ಇಂಡಿಯ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯ ಎಂದು ಹೊಗಳುವ ಕೆಲಸ ಮಾಡುತ್ತಿದ್ದರು ಎಂದರು.
ರಾಜ್ಯ ಮಟ್ಟದ ಸಂಚಾಲನಾ ಸಮಿತಿ..
ಅಭಿಯಾನಕ್ಕಾಗಿ ರಾಜ್ಯ ಮಟ್ಟದ ಸಂಚಾಲನಾ ಸಮಿತಿ ರಚಿಸಲಾಗಿದೆ ಎಂದು ಸಿ.ಟಿ.ರವಿ ಅವರು ತಿಳಿಸಿದರು.
ನಾನು, ನನ್ನ ಜೊತೆಗೆ ಸಹ ಸಂಚಾಲಕರಾಗಿ ಎನ್.ಮಹೇಶ್, ಡಾ. ಶಿವಯೋಗಿಸ್ವಾಮಿ, ವಿನಯ್ ಬಿದರೆ, ಶ್ರೀಮತಿ ಪೂರ್ಣಿಮಾ ಪ್ರಕಾಶ್, ಮಹೇಂದ್ರ ಕೌತಾಳ ಅವರು ಇರಲಿದ್ದಾರೆ. ವಿವಿಧ ಜಿಲ್ಲೆಗಳ ಉಸ್ತುವಾರಿಯನ್ನು ನೀಡಿದ್ದು, ತುರ್ತು ಪರಿಸ್ಥಿತಿಯ ಕರಾಳ ನೆನಪುಗಳ ಪ್ರದರ್ಶಿನಿ ಆಯೋಜಿಸುತ್ತೇವೆ. ಅದು ಸ್ವತಂತ್ರ ಭಾರತದ ಕಪ್ಪು ಯುಗ ಎಂದು ವಿಶ್ಲೇಷಿಸಿದರು.