Publish Date: Sat, 19 Jan 2019 (20:46 IST)
Updated Date: Sat, 19 Jan 2019 (20:48 IST)
ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಆಸೆ, ಆಮಿಷ ಒಡ್ಡಿ ರಾಜೀನಾಮೆ ಕೊಡಿಸುವ ಪ್ರಯತ್ನ ಮಾಡಿದ್ದರು. ಈ ಒಂದು ಕಾರಣಕ್ಕಾಗಿ ಸೇಫ್ಟಿಯಿಂದ ಕೈ ಶಾಸಕರು ರೆಸಾರ್ಟ್ ನಲ್ಲಿ ಇದ್ದಾರೆ ಎಂದು ಸಂಸದರು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರು ಇಂದು ಈಗಲ್ಟನ್ ರೆಸಾರ್ಟ್ ನಲ್ಲಿ ಸಭೆ ಸೇರಿದ್ದಾರೆ. ಬಿಜೆಪಿಯ ಶಾಸಕರು ಸಹ ಹರಿಯಾಣದ ರೆಸಾರ್ಟ್ ನಲ್ಲಿ ಕಳೆದ ಒಂದು ವಾರದಿಂದ ಇದ್ದಾರೆ ಎಂದು ಸಂಸದ ಆರ್.ದೃವನಾರಾಯಣ್ ಹೇಳಿಕೆ ನೀಡಿದ್ದಾರೆ.
ಪ್ರಜಾಪ್ರಭುತ್ವದ ನೆಲೆಯಲ್ಲಿ, ರಾಜ್ಯದ ಹಿತದೃಷ್ಟಿಯಿಂದ ಇಂತಹ ಬೆಳವಣಿಗೆ ಒಳ್ಳೆಯದಲ್ಲ. ಒಂದು ಪಕ್ಷದಿಂದ ಚುನಾಯಿತರಾದಂತಹವರು ಗೆದ್ದನಂತರ ಪಕ್ಷಾತೀತವಾಗಿ ಜನರ ಸೇವೆ ಮಾಡಬೇಕು. ಆದರೆ ಆಡಳಿತ ಪಕ್ಷವನ್ನು ಅಸ್ಥಿರಗೊಳಿಸುವಂತಹ ಕಾರ್ಯ ಸರಿಯಲ್ಲ ಎಂದರು.
ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ರವರು ಸಹ ಇದು ಒಳ್ಳೆಯ ಬೆಳವಣಿಗೆ ಅಲ್ಲ ಅಂತ ಹೇಳಿದ್ದಾರೆ. ಬಿಜೆಪಿಯವರು ತಂಗಿರುವ ರೆಸಾರ್ಟ್ ನಲ್ಲಿ ಒಂದು ದಿನಕ್ಕೆ 40 ಸಾವಿರ ಖರ್ಚು. ಇಂತಹ ದುಬಾರಿ ಖರ್ಚನ್ನು ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಮಾಡಬಾರದು ಎಂದರು.
ಇನ್ನು ಬಹುಮತ ಇರುವವರು ಸರ್ಕಾರ ನಡೆಸುತ್ತಾರೆ. ಆಡಳಿತ ಸರಿಯಿಲ್ಲ ಅಂದ್ರೆ ಮತ್ತೊಬ್ಬರಿಗೆ ಸರ್ಕಾರ ನಡೆಸುವ ಅವಕಾಶ ಸಿಗುತ್ತದೆ. ಅದಕ್ಕೆ ತಾಳ್ಮೆಯಿಂದ ಕಾಯಬೇಕು. ಅದನ್ನು ಬಿಟ್ಟು ಇಂತಹ ಆಪರೇಷನ್ ಕಮಲ ಮಾಡಬಾರದು ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದರು.