Publish Date: Sat, 30 Apr 2022 (20:40 IST)
Updated Date: Sat, 30 Apr 2022 (20:42 IST)
ಪಂಜಾಬ್ ನ ಪಟಿಯಾಲದಲ್ಲಿ ಶಿವಸೇನೆ ಮತ್ತು ಖಲಿಸ್ಥಾನ ಬೆಂಬಲಿಗರ ನಡುವೆ ಶುಕ್ರವಾರ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ತಹಬದಿಗೆ ತರಲು ತಾತ್ಕಾಲಿಕವಾಗಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಂಜಾಬ್ ಗೃಹ ಇಲಾಖೆ ಘೋಷಿಸಿದೆ. ಪಟಿಯಾಲಾದಲ್ಲಿ ಇಂದು ಬೆಳಗ್ಗೆ 9-30ರಿಂದ ರಾತ್ರಿ 9ರವರೆಗೆ ಇಂಟರ್ನೆಟ್ ಸರ್ವೀಸ್ ಸ್ಥಗಿತಗೊಳಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಶುಕ್ರವಾರ ಪಟಿಯಾಲಾದಲ್ಲಿ ಶಿವಸೇನೆ ಮತ್ತು ಖಲಿಸ್ಥಾನ ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿತ್ತು. ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪಟಿಯಾಲಾ ವಲಯದ ಐಜಿಪಿ ರಾಕೇಶ್ ಅಗರ್ವಾಲ್ ತಿಳಿಸಿದ್ದರು. ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪಟಿಯಾಲಾ ಡೆಪ್ಯುಟಿ ಕಮಿಷನರ್ ತಿಳಿಸಿದ್ದಾರೆ.