Publish Date: Tue, 17 Sep 2024 (14:40 IST)
Updated Date: Tue, 17 Sep 2024 (14:44 IST)
ಬೆಂಗಳೂರು: ದೇಶದಾದ್ಯಂತ ಮನೆ ಮಾತಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇದು ಹೆಸರಿಗೆ ಮಾತ್ರ ಧರ್ಮಸ್ಥಳ ಸಂಘ ಇಲ್ಲಿ ನಡೆಯುತ್ತಿರೋದೆಲ್ಲಾ ಅಧರ್ಮ ಎಂದಿದ್ದಾರೆ.
ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡಲು ಗ್ರಾಮಾಭಿವೃದ್ಧಿ ಸಂಘದ ಮೂಲಕ ಉದ್ಯೋಗ ತರಬೇತಿ, ಸಾಲ ಸೌಲಭ್ಯ ನೀಡಲಾಗುತ್ತಿದೆ. ಆದರೆ ಇದರ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಶಾಸಕ ನರೇಂದ್ರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ಕೊಟ್ಟ ಸಾಲಕ್ಕೆ 40 ರಷ್ಟು ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರ ಶೋಷಣೆ ಮಾಡಲಾಗುತ್ತಿದೆ. ಇದು ಜನರಿಗೆ ಅರ್ಥವಾಗುತ್ತಿಲ್ಲ. ಧರ್ಮಸ್ಥಳ ಸಂಘ ಎಂದು ಹೆಸರಿಗಷ್ಟೇ ಇದೆ. ಆದರೆ ಇಲ್ಲಿ ನಡೆಯುತ್ತಿರುವುದೆಲ್ಲವೂ ಅಧರ್ಮ ಎಂದಿದ್ದಾರೆ.
ಧರ್ಮಸ್ಥಳ ಸಂಘವನ್ನು ಬಿಟ್ಟು ಮಹಿಳೆಯರು ನಮ್ಮ ಸರ್ಕಾರದ ಸಂಜೀವಿನಿ ಯೋಜನೆಯ ಮೂಲಕ ತಮ್ಮ ಕೆಲಸ ಮಾಡಿಕೊಳ್ಳಿ. ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಿ ಎಂದು ಶಾಸಕರು ಸಲಹೆ ನೀಡಿದ್ದಾರೆ. ಮೊದಲು ಗ್ರಾಮೀಣ ಮಹಿಳೆಯರನ್ನು ಇಂತಹ ಮೈಕ್ರೋ ಫೈನಾನ್ಸ್ ಗಳ ಸುಳಿಯಿಂದ ಹೊರತರಬೇಕು ಎಂದಿದ್ದಾರೆ.