Publish Date: Thu, 12 Aug 2021 (18:27 IST)
Updated Date: Thu, 12 Aug 2021 (18:30 IST)
ಸಚಿವ ಸ್ಥಾನದಿಂದ ವಂಚಿತರಾದ ಮೇಲೆ ಅಸಮಾಧಾನಗೊಂಡಿದ್ದ ಎಂಪಿ ಕುಮಾರಸ್ವಾಮಿ, ಅತಿವೃಷ್ಟಿ ಪಟ್ಟಿಗೆ ಮೂಡಿಗೆರೆ ಕ್ಷೇತ್ರವನ್ನು ಸೇರಿಸಿಲ್ಲ ಧರಣಿ ನಡೆಸಿಲ್ಲ ಎನ್ನುವ ಮೂಲಕ ಪ್ರತಿಭಟನೆ ನಡೆಸಿದರು.ಈ ವೇಳೆ ಸಮಾಧಾನಪಡಿಸಲು ಬಂದ ಸಚಿವ ಆರ್.ಅಶೋಕ್ ಎದುರು ತಮ್ಮ ಅಸಹಾಯಕತೆಯನ್ನು ನೆನೆದು ಕಣ್ಣೀರಿಟ್ಟರು.
ಮೊದಲು ಅಶೋಕ್ ಅವರ ಪಿಎ ಬಂದು ಅಶೋಕ್ ಅವರಿಗೆ ದೂರವಾಣಿ ಕರೆ ಮಾಡಲು ಸೂಚಿಸಿದರು. ಇದರಿಂದ ಆಕ್ರೋಶಗೊಂಡ ಕುಮಾರಸ್ವಾಮಿ, ಮನವಿ ಮಾಡಲು ಕಚೇರಿಗೆ ಬಂದಾಗ ಹೇಗೆ ಮಾತನಾಡಿದಿರಿ. ಈಗ ಯಾಕೆ ಬಂದ್ರಿ, ಹೋಗ್ರಿ ಎಂದು ಕಿಡಿ ಕಾರಿದರು.
ನಂತರ ಸ್ಥಳಕ್ಕೆ ಆಗಮಿಸಿದ ಅಶೋಕ್ ಬಳಿ ತಮ್ಮ ದುಗುಡ ಹೇಳಿಕೊಂಡ ಕುಮಾರಸ್ವಾಮಿ, ನಾನು ಹಿರಿಯ ಶಾಸಕ, ನನಗೇ ಹಿಗೆ ಮಾಡೋದು ಸರಿಯಾ? ಎಷ್ಟು ಬೇಜಾರಾಗಲ್ಲ ನಮಗೆ ಹೇಳಿ? ಮಂತ್ರಿ ಸ್ಥಾನ ಕೊಡದೇ ಇದ್ದಾಗಲೂ ನಾನು ನಿಮ್ಮೆಲ್ಲರ ಮಾತು ಕೇಳಿಲ್ವಾ? ನಾನು ಪಕ್ಷಕ್ಕೆ ಲಾಯಲ್ ಆಗಿಲ್ವಾ? ಯಾವತ್ತಾದ್ರೂ ಬ್ಲ್ಯಾಕ್ ಮೇಲ್ ಮಾಡಿದ್ದೀನಾ? ನೀವೆಲ್ಲ ಹೇಳಿದ್ದು ಕೇಳಿಕೊಂಡಿಲ್ವಾ? ನನ್ನ ಮಾತಿಗೆ ತೂಕ ಇಲ್ಲ ಅಂದ್ರೆ ಹೇಗೆ? ಎಂದು ಕಣ್ಣೀರಿಟ್ಟರು.
ನನ್ನ ಕ್ಷೇತ್ರಕ್ಕೆ ಯಾಕೆ ಅನುಧಾನಗಳನ್ನ ಕೊಡುತ್ತಿಲ್ಲ. ಸಚಿವ ಸ್ಥಾನ ಕೊಡ್ಲೇಬೇಕು ಅಂತಾ ಡಿಮ್ಯಾಂಡ್ ಮಾಡಿದ್ನಾ? ಎಂದು ಅವರು ಕಿಡಿ ಕಾರಿದರು.
ನಂತರ ಎಂ.ಪಿ ಕುಮಾರಸ್ವಾಮಿ ಮನವೊಲಿಕೆ ಮಾಡಿದ ಆರ್. ಅಶೋಕ್, ಹೆಗಲ ಮೇಲೆ ಕೈ ಹಾಕಿ ತಮ್ಮ ಕೊಠಡಿಗೆ ಕರೆದೊಯ್ದರು. ಈ ವೇಳೆ ಮಾಧ್ಯಮದ ಮುಂದೆ ಎಲ್ಲಾ ಸಮಸ್ಯೆ ಬಗೆಹರಿಸ್ತೀವಿ ಅಂತಾ ಭರವಸೆ ನೀಡಿದರು.
ಅಶೋಕ್ ಭರವಸೆ ಹಿನ್ನೆಲೆ ಪ್ರತಿಭಟನೆ ವಾಪಾಸ್ ಪಡೆದ ಕುಮಾರಸ್ವಾಮಿ, ಅಶೋಕ್ ಜತೆ ವಿಧಾನಸೌಧಕ್ಕೆ ತೆರಳಿದರು.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಅವರು 20 ವರ್ಷದಿಂದ ಸ್ನೇಹಿತರು. ಅನುದಾನ ಸಮಸ್ಯೆ ಆಗಿದೆ ಬೆಳೆ ಪರಿಹಾರ ವಿನಂತಿ ಇದೆ. ಸಿಎಂ ಬಳಿ ಮಾತನಾಡಿ ಬೆಳೆ ಪರಿಹಾರ ಕೊಡಬೇಕಾಗಿದ್ದನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ತೇವೆ ಎಂದರು.