ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ ವಿಚಾರದಲ್ಲಿ ಮಿಥ್ಯಾರೋಪಕ್ಕೆ ಪ್ರಚಾರ ಸಿಗುವ ಬದಲು ಸತ್ಯ ದೃಢವಾಗಲಿ ಎಂಬ ದೃಷ್ಟಿಯಿಂದ ಎಸ್ಐಟಿ ರಚಿಸುವ ಪರಿಸ್ಥಿತಿ ಬಂದೋದಗಿತು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಟಿಗೆ ನೀಡಿದ್ದನ್ನು ಬಿಜೆಪಿಯವರೂ ಸ್ವಾಗತಿಸಿದ್ದರು. ಈಗ ಇದನ್ನೆ ಅವರು ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಅನಾಮಿಕನೊಬ್ಬ ಧರ್ಮಸ್ಥಳದ ಸುತ್ತಾಮುತ್ತಾ ಹಲವು ಶವಗಳನ್ನು ಹೂತಿಟ್ಟಿರುವುದಾಗಿ ಗಂಭೀರ ಆರೋಪ ಮಾಡಿದ. ಸತ್ಯಾಂಶ ಹೊರತೆಗೆಯುವುದು ಸರ್ಕಾರದ ಹೊಣೆಯಾಗಿತ್ತು.
ಎಸ್ಐಟಿ ಮಾಡಿದ್ದರಿಂದ ಧರ್ಮಸ್ಥಳದ ಶಕ್ತಿ ಮತ್ತು ಆ ಕ್ಷೇತ್ರದ ಬಗೆಗಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಏಕೆಂದರೆ, ಇದರಿಂದ ವಿನಾ ಕಾರಣ ಕಳಂಕ ಅಂಟಿಕೊಳ್ಳುವ ಅಪಾಯ ತಪ್ಪಿತು ಎಂದು ತಿಳಿಸಿದರು.
ಬಿಜೆಪಿಯವರಿಗೆ ಧರ್ಮಸ್ಥಳದಲ್ಲಿ ಏನೋ ನಡೆಯಬಾರದ್ದು ನಡೆದಿರಬಹುದು ಎನ್ನುವ ಅನುಮಾನವಿತ್ತು. ಇಲ್ಲದಿದ್ದರೆ ಅವರ್ಯಾಕೆ ಎಸ್ಐಟಿ ತನಿಖೆಯನ್ನು ಸ್ವಾಗತಿಸುತ್ತಿದ್ದರು.
ಈಗ ಅಲ್ಲಿ ಅಂಥದ್ದೇನೂ ನಡೆದಿಲ್ಲ ಎಂದಾಗಿದೆ. ಹೀಗಾಗಿ ಬಿಜೆಪಿ ಇದನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹವಣಿಸುತ್ತಿದೆ. ಎಸ್ಐಟಿ ಮಾಡಿದ್ದರಿಂದ ಒಳ್ಳೆಯದೆ ಆಗಿದೆ. ಇದಕ್ಕಾಗಿ ರಾಜ್ಯ ಸರಕಾರ ಕ್ಷಮೆ ಕೇಳುವ ಪ್ರಶ್ನೆಯೆ ಇಲ್ಲ ಎಂದು ಅವರು ಪ್ರತಿಪಾದಿಸಿದರು.