ಬೆಳಗಾವಿ: ದಲಿತರ ಕಲ್ಯಾಣಕ್ಕೆ ಮೀಸಲಾಗಿದ್ದ 25,000 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗಿದೆ ಎಂದು ಸಚಿವ ಮಹದೇವಪ್ಪನವರೇ ಒಪ್ಪಿಕೊಂಡಿದ್ದು, ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಸರ್ಕಾರ ಪ್ರತೀ ವರ್ಷ ಗ್ಯಾರಂಟಿ ಯೋಜನೆಗಾಗಿ ಪ್ರತೀ ವರ್ಷ 50,000 ಕೋಟಿ ರೂ.ಗಳಷ್ಟು ವೆಚ್ಚ ಮಾಡುತ್ತಿದೆ. ಇದಕ್ಕೆ ಹಣ ಹೊಂದಿಸಲು ಹಲವು ಅಭಿವೃದ್ಧಿ ಯೋಜನೆಗಳಿಗೆ ಕತ್ತರಿ ಹಾಕಿರುವುದು ಈಗ ಗುಟ್ಟಾಗೇನೂ ಉಳಿದಿಲ್ಲ. ಇದೀಗ ಸ್ವತಃ ಸಚಿವ ಮಹದೇವಪ್ಪನವರೇ ಗ್ಯಾರಂಟಿ ಯೋಜನೆಗಾಗಿ ದಲಿತರಿಗೆ ಮೀಸಲಿಟ್ಟಿದ್ದ ಹಣ ಬಳಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಇದರ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್ ಅಶೋಕ್ ದಲಿತರ ಹಣ ದುರ್ಬಳಕೆ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ. ದಲಿತ ಸಮುದಾಯದ ನಾಯಕರ ಬೆನ್ನಿಗೆ ಚೂರಿ ಹಾಕಿ ಎರಡು ಬಾರಿ ಅಧಿಕಾರಕ್ಕೇರಿರುವ ಸಿಎಂ ಸಿದ್ದರಾಮಯ್ಯನವರ ದಲಿತ ವಿರೋಧಿ ನೀತಿಗಳು ಅಲ್ಲಿಗೇ ನಿಂತಿಲ್ಲ.
ದಲಿತರ ಅಭ್ಯುದಯಕ್ಕಾಗಿ ವಿನಿಯೋಗವಾಗಬೇಕಾಗಿದ್ದ ₹25,000 ಕೋಟಿ ರೂಪಾಯಿ ಎಸ್ಸಿಪಿ/ಟಿಎಸ್ಪಿ ಹಣವನ್ನ ಗ್ಯಾರೆಂಟಿ ಹೆಸರಿನಲ್ಲಿ ಕಬಳಿಸಿ ದಲಿತರಿಗೆ ವಂಚನೆ ಮಾಡುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಇದೇನಾ ದಲಿತರ ಬಗ್ಗೆ ನಿಮಗಿರುವ ಬದ್ಧತೆ?
ಗ್ಯಾರೆಂಟಿ ಯೋಜನೆಗಳ ಹೆಸರಿನಲ್ಲಿ ಕನ್ನಡಿಗರ ಖಜಾನೆ ಲೂಟಿ ಮಾಡಿ ರಾಜ್ಯವನ್ನ ಅಭಿವೃದ್ಧಿ ಶೂನ್ಯ ಮಾಡಿರುವ ಕಾಂಗ್ರೆಸ್ ಸರ್ಕಾರ ನಾಡಿನ ಬಡವರು, ರೈತರು, ಮಹಿಳೆಯರು ಹಾಗೂ ಯುವಕರಿಗೆ ಮೋಸ ಮಾಡುತ್ತಿದೆ ಎಂದಿದ್ದಾರೆ.