Publish Date: Wed, 25 Jul 2018 (18:15 IST)
Updated Date: Wed, 25 Jul 2018 (18:18 IST)
ಇನ್ನೇನು ಮಹದಾಯಿ ರಾಜ್ಯದ ಅಂತಿಮ ತೀರ್ಪು ಹೊರ ಬರುತ್ತದೆ ಎಂಬ ಆಶಾ ಭಾವನೆ ಮೂಡಿರುವಾಗಲೇ ಗೋವಾ ಸರಕಾರ ಮತ್ತೆ ಹೊಸ ಕ್ಯಾತೆ ತೆಗೆದಿದ್ದು, ಕರ್ನಾಟಕದ ವಿರುದ್ಧ ನ್ಯಾಯಾಧಿಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ, ಅಂತಿಮ ತೀರ್ಪು ತಡೆಯುವ ಹುನ್ನಾರ ನಡೆಸಿದೆ. ಆ ಮೂಲಕ ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ.
ಆಗಷ್ಟ್ ಎರಡನೇ ವಾರದಲ್ಲಿ ಮಹದಾಯಿ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದ್ದು, ಗೋವಾ ಸರಕಾರ ಶತಾಯ-ಗತಾಯ ತೀರ್ಪು ತಡೆಹಿಡಿಯುವ ಹುನ್ನಾರ ನಡೆಸಿದೆ. ಕರ್ನಾಟಕ ಸರಕಾರ ಮಹದಾಯಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿದೆ ಎಂದು ಆರೋಪಿಸಿ ನ್ಯಾಯಾಧಿಕರಣಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಲು ಮುಂದಾಗಿದೆ. ಈ ಕುರಿತು ಮಾತನಾಡಿರುವ ಗೋವಾ ನೀರಾವರಿ ಸಚಿವ ವಿನೋದ ಪಾಲೇಕರ್, ಗೋವಾದ ಅಧಿಕಾರಿಗಳ ತಂಡ ಕಳಸಾ-ಬಂಡೂರಿ ನಾಲಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕರ್ನಾಟಕ ಅಕ್ರಮ ಕಾಮಗಾರಿ ಮೂಲಕ ಮಹದಾಯಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿರುವುದು ಕಂಡು ಬಂದಿದೆ. ಅದಕ್ಕಾಗಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ.
ಕರ್ನಾಟಕ ಸರ್ಕಾರ ನ್ಯಾಯಾಧೀಕರಣದ ವಿರುದ್ಧ ಎಂದೂ ಹೋಗಿಲ್ಲ. ಇಷ್ಟಾದರೂ ಗೋವಾ ಸರಕಾರ ನಿರಾಧಾರವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವುದು ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ.