Publish Date: Sat, 24 Mar 2018 (16:00 IST)
Updated Date: Sat, 24 Mar 2018 (16:02 IST)
ಬಿ.ಎಸ್. ಯಡಿಯೂರಪ್ಪ ಹಿರಿಯರಾದರೂ ಮೂರ್ಖತನ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯ ವಿಶ್ವೇಶ್ವರಯ್ಯ ಜಲ ನಿಗಮ ಕಾಮಗಾರಿಯ ಫೈಲನ್ನು ಯಡಿಯೂರಪ್ಪವರಿಗೆ ಕೊಟ್ಟು ಕಳಿಸುತ್ತೇನೆ. ಅವರು ಎಕ್ಸಫರ್ಟ್ ಕರೆಯಿಸಿ ಅದನ್ನು ಮೊದಲು ಪರಿಶೀಲಿಸಲಿ ಎಂದು ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ವಿಜಯಪುರದಲ್ಲಿ ಸವಾಲು ಹಾಕಿದ್ದಾರೆ.
ಇನ್ನು ಕಾಮಗಾರಿ ಗುತ್ತಿಗೆ ಪಡೆದವರು ಸರಿಯಾದ ದಾಖಲಾತಿ ನೀಡಿಲ್ಲ.ಕಾರಣ ಅವರ ಇಎಂಡಿ ಮುಟ್ಟುಗೋಲು ಹಾಕಿ ಗುತ್ತಿಗೆದಾರನ್ನು ಕಪ್ಪು ಪಟ್ಟಿಗೆ ಸೇರಿಸಿದ್ದೇವೆ ಎಂದರು. ಈ ವಿಷಯದಲ್ಲಿ ಯಡಿಯೂರಪ್ಪ ಅವರ ಬಗ್ಗೆ ಕನಿಕರ ಮೂಡುತ್ತಿದೆ. ಯಡಿಯೂರಪ್ಪ ಮೂರ್ಖತನದಿಂದ ಇದ್ದಾರೆ ಎಂದು ವ್ಯಂಗ್ಯವಾಡಿದರು. ಇನ್ನು ಐಟಿ ರೇಡ್ ಮೂಲಕ ಕಾಂಗ್ರೆಸ್ ನಾಯಕರನ್ನು ಹತ್ತಿಕ್ಕಲಾಗುತ್ತಿದೆ. ಸಚಿವ ಡಿ. ಕೆ. ಶಿವಕುಮಾರ ಮನೆ ಮೇಲೆ ದಾಳಿ ಮಾಡಿದ್ದರು. ಈಗ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ನನ್ನ ಮೇಲೆ ಐಟಿ ದಾಳಿ ಮಾಡಲಿದ್ದಾರೆ ಎಂದರು.
ಅಲ್ಲದೆ ಕಾಂಗ್ರೇಸ್ ನಾಯಕರ ಮೇಲಿನ ಐಟಿ ರೇಡ್ ನಂತೆ ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಆರ್ ಅಶೋಕ, ಈಶ್ವರಪ್ಪ ಮೇಲೆ ಐಟಿ ರೇಡ್ ಮಾಡಿಸಲಿ ಎಂದು ಸವಾಲು ಹಾಕಿದರು. ಇನ್ನು ಚುನಾವಣೆಯ ಸಂದರ್ಭದಲ್ಲಿ ಪಕ್ಷಾಂತರ ನಡೆಯುತ್ತದೆ. ಕಾಂಗ್ರೆಸ್ ಪಕ್ಷಕ್ಕೂ ಬರಲು ಬಿಜೆಪಿಯ ಅನೇಕ ನಾಯಕರು ಅರ್ಜಿ ಹಾಕಿದ್ದಾರೆ ಎಂದರು.
ಈ ಮೂಲಕ ಮುಂಬರುವ ದಿನಗಳಲ್ಲಿ ಬಿಜೆಪಿಯವರೂ ಕಾಂಗ್ರೆಸ್ ಸೇರಲಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಮುನ್ಸೂಚನೆ ನೀಡಿದರು.