ಬೆಂಗಳೂರು: ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಇಂದು ನಡೆಯಲಿದೆ. ಇದರ ಪರಿಣಾಮವಾಗಿ ಬೆಂಗಳೂರಿನ ಬಹುತೇಕ ದೇವಾಲಯಗಳಿಗೆ ಮಧ್ಯಾಹ್ನವೇ ಬಾಗಿಲು ಮುಚ್ಚಲಾಗುತ್ತದೆ.
ಭಾರತದಲ್ಲಿ ಇಂದು ಚಂದ್ರಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳು ಮಧ್ಯಾಹ್ನದ ಬಳಿಕ ಬಂದ್ ಆಗಲಿವೆ. ನಗರದ ಪ್ರಸಿದ್ಧ ದೇಗುಲಗಳ ಸಮಯವೂ ಬದಲಾವಣೆಯಾಗಲಿದೆ.
ಬೆಂಗಳೂರಿನ ಗವಿಪುರಂನ ಗವಿಗಂಗಾಧರೇಶ್ವರ ದೇವಾಲಯದಲ್ಲಿಬೆಳಗ್ಗೆ 11 ಗಂಟೆಗೆ ಬಂದ್ ಆಗಲಿದೆ. ಗ್ರಹಣದ ಮರುದಿನ ಸೋಮವಾರ ಬೆಳಗ್ಗೆ 6 ಗಂಟೆಗೆ ಶುದ್ಧೀಕರಣ, ಪುಣ್ಯ ಮಾಡಿ ದರ್ಶನ ವ್ಯವಸ್ಥೆ ಮಾಡಲಾಗಿದೆ.
ಬನಶಂಕರಿ ದೇಗುಲದಲ್ಲಿ ದೇವಿ ಜನ್ಮದಿನೋತ್ಸವವಿದ್ದು, ಸಂಜೆ 4 ಗಂಟೆಯವರೆಗೆ ಚಂಡಿಕಾ ಹೋಮ ಸೇರಿದಂತೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ರಾಹುಕಾಲದ ಪೂಜೆ ಮುಗಿಸಿ 6 ಗಂಟೆಗೆ ದೇವಾಲಯದ ಎಲ್ಲಾ ಕಡೆ ದರ್ಬೆ ಇಟ್ಟು ಬಾಗಿಲು ಬಂದ್ ಮಾಡಲಾಗುತ್ತದೆ.
ಕಾಡುಮಲ್ಲೇಶ್ವರ ದೇವಾಲಯ, ಮಧ್ಯಾಹ್ನ 12:30ಕ್ಕೆ ಬಂದ್ ಆಗಲಿದೆ. ಸೋಮವಾರ ಬೆಳಿಗ್ಗೆ 4 ಗಂಟೆಗೆ ದೇವಾಲಯ ತೆರೆಯಲಿದ್ದು, ಶುದ್ಧೀಕರಣ ಕಾರ್ಯ, ನಂತರ ಗ್ರಹಣ ಶಾಂತಿಗಾಗಿ ರುದ್ರ ಹೋಮ, ಪ್ರಸಾದ ಸೇವೆಯಿದೆ.
ನಗರದ ಗಾಳಿ ಆಂಜನೇಯ ದೇವಸ್ಥಾನ ಇಂದು ಮಧ್ಯಾಹ್ನ 3 ಗಂಟೆಗೆ ಬಂದ್ ಆಗಲಿದ್ದು, ದೇವಾಲಯವನ್ನ ದರ್ಬೆ ಹಾಕಿ ಮುಚ್ಚಲಾಗಿದೆ. ಸೋಮವಾರ ಬೆಳಗ್ಗೆ 4ಕ್ಕೆ ಗ್ರಹಣ ಮುಕ್ತಿ ಶುಚಿತ್ವ ಕಾರ್ಯ ನಡೆಸಲಿದ್ದು, 6 ಗಂಟೆಯ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.