Publish Date: Wed, 26 Jun 2019 (16:11 IST)
Updated Date: Wed, 26 Jun 2019 (16:13 IST)
ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ ಇವಿಎಂ ಬೇಡ ಎಂದು ವಿರೋಧಿಸಿ ಕಾಂಗ್ರೆಸ್ ನಿಂದ ಪತ್ರ ಚಳುವಳಿ ಆರಂಭಗೊಂಡಿದೆ.
ಕೆಪಿಸಿಸಿ ಮಹಿಳಾ ಘಟಕ ವತಿಯಿಂದ ಪತ್ರಚಳುವಳಿ ನಡೆಸಲಾಯಿತು. ಬೆಂಗಳೂರು ನಗರದ ಅಂಚೆ ಕಚೇರಿ ಮುಂಭಾಗ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ನೇತೃತ್ವದಲ್ಲಿ ಪ್ರತಿಭಟನಾ ಪತ್ರ ಚಳುವಳಿ ನಡೆಸಿದ ಮಹಿಳಾ ಕಾರ್ಯಕರ್ತರು, ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತಕ್ಕೆ ಇವಿಎಂ ಮತದಾನ ಮಾರಕವಾಗಿ ಪರಿಣಮಿಸುತ್ತಿದೆ.
ಇವಿಎಂ ಬೇಡ, ಮತಪತ್ರ ಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿಯವರಿಗೆ ಒಂದು ಲಕ್ಷ ಅಂಚೆಪತ್ರಗಳನ್ನು ರವಾನಿಸಲಾಯಿತು.
ಪುಷ್ಪಾ ಅಮರನಾಥ್ ಮಾತನಾಡಿ, ಅಮೇರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿಯೂ ಸಾಂಪ್ರದಾಯಿಕ ಮತಪತ್ರಗಳನ್ನೇ ಬಳಕೆ ಮಾಡಲಾಗುತ್ತಿದೆ.ಇವಿಎಂ ಬಗ್ಗೆ ಬಹಳ ಅನುಮಾನಗಳಿವೆ.ಹಾಗಾಗಿ ಇವಿಎಂ ಬಳಕೆ ನಿಷೇಧಿಸುವಂತೆ ರಾಷ್ಟ್ರಪತಿಯವರಿಗೆ ಒತ್ತಾಯಿಸುತ್ತಿರುವುದಾಗಿ ಹೇಳಿದರು.
ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ಬಹುತೇಕ ರಾಷ್ಟ್ರಗಳು ಇವಿಎಂ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ಭಾರತದಲ್ಲಿ ಮಾತ್ರ ಇವಿಎಂ ಬೇಕು ಎಂದು ಕೇಂದ್ರ ಬಿಜೆಪಿ ಹಠ ಮಾಡುತ್ತಿರುವುದು ಏಕೆ ಎಂಬುದು ಗೊತ್ತಾಗಬೇಕಿದೆ. ಇವಿಎಂ ಎಂಬ ಮಹಾಮಾರಿಯನ್ನು ದೇಶದಿಂದ ಹೊಡೆದೋಡಿಸಬೇಕಿ ಎಂದರು.