Select Your Language

Notifications

webdunia
webdunia
webdunia
webdunia

ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸಚಿವ ಶ್ರೀ ರಾಮುಲು ಅಸ್ತು

ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸಚಿವ ಶ್ರೀ ರಾಮುಲು ಅಸ್ತು
ಬೆಂಗಳೂರು , ಶುಕ್ರವಾರ, 16 ಸೆಪ್ಟಂಬರ್ 2022 (14:30 IST)
ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ವಾಯವ್ಯ ಕರ್ನಾಟಕ ಸಾರಿಗೆ ನಿಗಮ (NWKRTC), ಈಶಾನ್ಯ ಕರ್ನಾಟಕ ಸಾರಿಗೆ ನಿಗಮ (NEKRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಿಗಮಗಳ ನಾಲ್ವರು ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಈ ಸಂಬಂಧ ಸಮಿತಿ ರಚಿಸಲಾಗಿದೆ.
ಸಮಿತಿಯ ವರದಿಯು ಸಲ್ಲಿಕೆಯಾದ ನಂತರ ಸರ್ಕಾರವು ಅಗತ್ಯ ತೀರ್ಮಾನ ತೆಗೆದುಕೊಳ್ಳಲಿದೆ. ಆದಷ್ಟೂ ಬೇಗ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ವಿಧಾನ ಪರಿಷತ್​ ಸದಸ್ಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಉತ್ತರಿಸುವಾಗ ಸಚಿವ ಶ್ರೀರಾಮುಲು ಹೇಳಿದರು. ಸಾರಿಗೆ ಇಲಾಖೆಯಲ್ಲಿ ಮತ್ತು ಸಾರಿಗೆ ನಿಗಮಗಳಲ್ಲಿ ಹಲವು ಸಮಸ್ಯೆಗಳಿವೆ. ಬಸ್​​ ದರಗಳನ್ನು ಹೆಚ್ಚಿಸಲು ನಮಗೆ ಇನ್ನೂ ಸಾಧ್ಯವಾಗಿಲ್ಲ ಎಂದು ನುಡಿದರು.
 
ಕಳೆದ ನಾಲ್ಕು ವರ್ಷಗಳಿಂದ ಸಾರಿಗೆ ನೌಕರರ ವೇತನ ವೇತನ ಪರಿಷ್ಕರಣೆ ಆಗಿಲ್ಲ. ಕೆಎಸ್​ಆರ್​ಟಿಸಿ ಮತ್ತು ಇತರ ನಿಗಮಗಳ ಹಲವು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಸರ್ಕಾರವೇ ಪರಿಹಾರ ಒದಗಿಸಬೇಕು. ಸಾರಿಗೆ ಇಲಾಖೆಯ ಬಸ್​ಗಳಿಗೆ ಖಾಸಗಿ ಬಂಕ್​ಗಳಿಂದ ಡೀಸೆಲ್ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇದು ಬೇಸರದ ಸಂಗತಿ ಎಂದು ಅವರು ಹೇಳಿದರು.
 
ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಸಚಿವ ಶ್ರೀರಾಮುಲು, ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರವು ಬದ್ದವಾಗಿವೆ. ನಾಲ್ವರು ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಮಿತಿಯು ವರದಿ ಸಲ್ಲಿಸಿದ ಬಳಿಕ ಈ ಬಗ್ಗೆ ನಿರ್ಧರಿಸುತ್ತೇವೆ. 2016ರ ನಂತರ ಸಾರಿಗೆ ನಿಗಮಗಳಲ್ಲಿ ವೇತನ ಪರಿಷ್ಕರಣೆ ಆಗಿಲ್ಲ. ಇಲಾಖೆಯಲ್ಲಿ ಹಲವು ಸಮಸ್ಯೆಗಳಿವೆ. ಬಸ್ ದರ ಹೆಚ್ಚಳ ಮಾಡುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ವೇತನ ಪರಿಷ್ಕರಣೆ ವಿಚಾರ ಇತ್ಯರ್ಥ ಮಾಡುತ್ತೇವೆ. ಸರ್ಕಾರದಿಂದ ನಿಗಮಗಳಿಗೆ ಈವರೆಗೆ ₹ 16 ಸಾವಿರ ಕೋಟಿ ಸಹಾಯಧನ ಲಭ್ಯವಾಗಿದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಅಬ್ಬರ ಶುರು ..!!!