Publish Date: Sat, 19 Jan 2019 (14:28 IST)
Updated Date: Sat, 19 Jan 2019 (14:31 IST)
ಆ ಜಿಲ್ಲೆಯ ಪಟ್ಟಣವೊಂದರಲ್ಲಿ ಕಿಡ್ನಿ ಮಾರಾಟ ಜಾಲಕ್ಕೆ ಸಿಲುಕಿ ಹಣವನ್ನು ಕಳೆದುಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆಗೀಡಾಗಿದ್ದಳು. ಈ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ್ದು, ಕಿಡ್ನಿ ಮಾರಾಟ ಜಾಲ ವಿದೇಶಕ್ಕೂ ವಿಸ್ತರಣೆ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ.
ಮಂಡ್ಯ ಪೊಲೀಸರು ಕಿಡ್ನಿ ಮಾರಾಟ ಜಾಲ ಬೇಧಿಸಿದ್ದಾರೆ. ಸಕ್ಕರೆ ನಾಡಿನ ಕಿಡ್ನಿ ಮಾರಾಟ ಜಾಲ ವಿದೇಶಿ ಕಿಡ್ನಿ ಮಾರಾಟ ಜಾಲದ ಜೊತೆ ತಳುಕು ಹಾಕಿಕೊಂಡಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಕಳೆದ ಜನವರಿ 9ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಗಂಗಾಮತಸ್ಥರ ಕಾಲೋನಿಯ ವೆಂಕಟಮ್ಮ ಬಡ ಮಹಿಳೆ ಪಕ್ಕದ ಬೀದಿಯ ತಾರಾ ಎಂಬ ಕಿಡ್ನಿ ಮಾರಾಟ ಮಾಡುವ ಮಹಿಳೆಯ ವಂಚನೆಗೆ ಒಳಗಾಗಿದ್ದಳು. ತಾರಾ ಎಂಬಾಕೆ ವೆಂಕಟಮ್ಮಳ ಬಡತನವನ್ನ ಬಂಡವಾಳ ಮಾಡಿಕೊಂಡು ಕಿಡ್ನಿ ಕೊಟ್ಟರೆ 30 ಲಕ್ಷ ಹಣ ಕೊಡೋದಾಗಿ ನಂಬಿಸಿ, ಕಿಡ್ನಿ ಕೊಡುವ ಮೊದಲು ನೀನೇ ಮುಂಗಡ ಹಣ ಕೊಡಬೇಕೆಂದು ಹೇಳಿ ವೆಂಕಟಮ್ಮ ಬಳಿ ಸಾಲ ಮಾಡಿಸಿ ಎರಡು ಲಕ್ಷದ ಎಂಬತ್ತು ಸಾವಿರ ಹಣ ಪಡೆದುಕೊಂಡಿದ್ದಳು. ಸಾಲ ಮಾಡಿ ಹಣ ಕೊಟ್ಟಿದ್ದ ಬಡ ಮಹಿಳೆ ವೆಂಕಟಮ್ಮ ಇತ್ತ ಕಿಡ್ನಿಯನ್ನು ಕೊಡಲಾಗದೇ ಹಣವೂ ವಾಪಸ್ ಬರದ್ದಿರಿಂದ 30 ಲಕ್ಷದ ಆಸೆಗೆ ಲಕ್ಷಾಂತರ ರೂ. ಸಾಲ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.
ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿರುವ ಮಂಡ್ಯ ಜಿಲ್ಲೆಯ ಪೊಲೀಸರು ಪ್ರಮುಖ ಆರೋಪಿ ತಾರಾ ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ. ಮಂಡ್ಯ ಹಾಗೂ ರಾಮನಗರ ಜಿಲ್ಲೆ ಮೂಲದವರ ತಾರಾ, ಗೋಪಾಲ್, ತಿಮ್ಮಯ್ಯ, ರಾಜು ಹಾಗೂ ಜವರಯ್ಯ ಎಂಬುವರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಕಿಡ್ನಿ ಮಾರಾಟದ ಕರಾಳ ಮುಖವಾಡವನ್ನು ಬಯಲಿಗೆಳೆದಿದ್ದಾರೆ. ಶ್ರೀಲಂಕಾ, ಸಿಂಗಾಪೂರ್ ಸೇರಿದಂತೆ ವಿದೇಶಗಳ ಜೊತೆಯೂ ಕಿಡ್ನಿ ಮಾರಾಟ ದಂಧೆಯ ಸಂಬಂಧವನ್ನ ಆರೋಪಿಗಳು ಹೊಂದಿದ್ದಾರೆ ಎನ್ನಲಾಗಿದೆ.