ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಅಲ್ಲಲ್ಲಿ ಸಣ್ಣ ಮಟ್ಟಿಗೆ ಮಳೆಯಾಗುತ್ತಿದೆ. ಇಂದೂ ಕೆಲವು ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ತುಂತುರು ಮಳೆಯಾಗಿತ್ತು. ಜೊತೆಗೆ ದಿನವಿಡೀ ದಟ್ಟ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ.
ಹವಾಮಾನ ವರದಿಗಳ ಪ್ರಕಾರ ಇಂದೂ ಇದೇ ವಾತಾವರಣ ಮುಂದುವರಿಯಲಿದೆ. ಇಂದು ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 26 ಡಿಗ್ರಿಯಷ್ಟಿರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿಯಷ್ಟು ಕಂಡುಬರುವ ಸಾಧ್ಯತೆಯಿದೆ.
ಇಂದು ಮೈಸೂರು, ಮಂಡ್ಯ, ಬೆಂಗಳೂರು, ಚಾಮರಾಜಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಇಂದು ಸಣ್ಣಮಟ್ಟಿಗೆ ಮಳೆಯಾಗುವ ಸೂಚನೆಯಿದೆ. ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಭಾಗಶಃ ಮೋಡ ಅಥವಾ ಬಿಸಿಲಿನ ವಾತಾವರಣವಿರಲಿದೆ.